ADVERTISEMENT

ಕೊಪ್ಪಳ | ಪ್ರಚೋದನಕಾರಿ ಹೇಳಿಕೆ: ಎಸ್‌ಡಿಪಿಐನ ಮೂವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 16:13 IST
Last Updated 17 ಸೆಪ್ಟೆಂಬರ್ 2024, 16:13 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಕಾರಟಗಿ: ವಕ್ಫ್‌ ಮಸೂದೆ ತಿದ್ದುಪಡಿ ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಇತ್ತೀಚೆಗೆ ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಹಿಂದೂ ಸಮಾಜದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸಂಘಟನೆಯ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಂಘಟನೆಯ ಕಾರ್ಯದರ್ಶಿ ಇಮ್ರಾನ್‌, ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜ್ಮೀರ್‌ ಸಿಂಗನಾಳ ಮತ್ತು ಉಪಾಧ್ಯಕ್ಷ ದಾವೂದ್‌ ವಿರುದ್ಧ ಕಾರಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೇಳಿಕೆಯೇನು?: ಸೆಪ್ಟೆಂಬರ್ 13ರಂದು ಎಸ್‌ಡಿಪಿಐ ಪ್ರತಿಭಟನೆ ನಡೆಸುವಾಗ ಇಮ್ರಾನ್‌ ‘1992ರಲ್ಲಿ ಬಾಬರಿ ಮಸೀದಿ ಘಟನೆ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಘಟನೆಯ ಪ್ರತೀಕಾರವಾಗಿ ವೀರಸಾವರ್ಕರರ ಸಂತತಿ ಮುಗಿಸುತ್ತೇವೆ. ಹಿಂದೂಗಳ ಗುರುವಾದ ನಾಗಪುರದಲ್ಲಿರುವ ವೀರ ಸಾವರರ್ಕರ್‌ ಸಂತತಿಗಳು ಬಂದರೂ ಮುಸಲ್ಮಾನರ ವಕ್ಫ್‌ ಆಸ್ತಿ ಮುಟ್ಟಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದರು.

ADVERTISEMENT

ಮುಸಲ್ಮಾನರು ಕಾರಟಗಿಯಲ್ಲಿ ಸಣ್ಣ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರಬಹುದು. ನೆನಪಿರಲಿ ಇದೇ ದೇಶದಲ್ಲಿ ಎನ್‌ಆರ್‌ಸಿ ಕಾಯ್ದೆ ಬಂದಿತ್ತು. ಅದನ್ನು ನಮ್ಮ ಹೆಣ್ಣುಮಕ್ಕಳು ಒದ್ದು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕಾರಟಗಿ ಮಂಡಲದ ಅಧ್ಯಕ್ಷ ಮಂಜುನಾಥ ಮಸ್ಕಿ ದೂರು ನೀಡಿದ್ದರು.

ಈ ಘಟನೆ ಕುರಿತು ಕೊಪ್ಪಳದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ‘ಸಮಾಜದ ಶಾಂತಿ ಕದಡಿದರೆ ಯಾವ ಸಂಘಟನೆಯಾದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.