ಕೊಪ್ಪಳ: ‘ದೇಶದ ಪ್ರತಿಯೊಬ್ಬರೂ ಸ್ವಾರ್ಥರಹಿತವಾಗಿ ಕೆಲಸ ಮಾಡಬೇಕು. ದೇಶಕ್ಕಾಗಿ ದುಡಿಯವಂತಾಗಬೇಕು ಎನ್ನುವ ಉದ್ದೇಶವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹೊಂದಿದೆ. ಇದೇ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ’ ಎಂದು ಸಂಘದ ಬಳ್ಳಾರಿ ವಿಭಾಗದ ವ್ಯವಸ್ಥಾ ಪ್ರಮುಖ ಎ. ನಾಗರಾಜ ಹೇಳಿದರು.
ಇಲ್ಲಿನ ಭಾಗ್ಯನಗರದಲ್ಲಿ ಆಯೋಜಿಸಿದ್ದ ಆರ್ಎಸ್ಎಸ್ ವರ್ಗದ ಸಮಾರೋಪದಲ್ಲಿ ಮಾತನಾಡಿದ ಅವರು ’ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆರ್ಎಸ್ಎಸ್ ಪ್ರಾರಂಭವಾಗಿ 97 ವರ್ಷಗಳಾಗಿವೆ. ದೇಶವನ್ನು ಕಟ್ಟಬೇಕು ಎನ್ನುವ ಉದ್ದೇಶದಿಂದ ಆರಂಭವಾದ ಸಂಘಟನೆ ಇದಾಗಿದೆ. ಎಲ್ಲರಲ್ಲೂ ದೇಶದ ಬಗ್ಗೆ ಜಾಗೃತಿ ಮೂಡಿಸಿ ದೇಶದ ಏಕತೆಗಾಗಿ ಕೆಲಸ ಮಾಡಬೇಕಾಗಿದೆ. ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರು ಆರ್ಎಸ್ಎಸ್ ಸೇವಕರಿಂದ ಸಂಚಲನ ಮಾಡಿಸಿದ್ದರು’ ಎಂದು ನೆನಪಿಸಿಕೊಂಡರು.
‘ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಬೇಕೆಂದು ಹಿಂದೂಗಳು ಬಯಸುತ್ತಾರೆ. ಸರ್ವೇ ಜನಃ ಸುಖಿನೊ ಭವಂತು ಎಂಬುದು ಹಿಂದೂಗಳ ಹಾರೈಕೆಯಾಗಿದೆ. ಈ ಚಿಂತನೆಯಲ್ಲಿ ಸಂಘ ಕೆಲಸ ಮಾಡುತ್ತದೆ. ಸಂಘದ ವರ್ಗದಲ್ಲಿ ಯಾವುದೇ ಜಾತಿ, ಮತ ಎಣಿಸದೇ ಎಲ್ಲರು ಒಟ್ಟಾಗಿ ಶಿಕ್ಷಣ ಪಡೆಯುತ್ತಾರೆ’ ಎಂದರು.
ಕೊಪ್ಪಳದ ವೈದ್ಯ ಮಹೇಂದ್ರ ಸಿಂದ್ರೆ ಅಧ್ಯಕ್ಷತೆ ವಹಿಸಿದ್ದರು. ವರ್ಗಾಧಿಕಾರಿ ಗಂಗಾವತಿಯ ನಾಗರಾಜ ಗುತ್ತೇದಾರ ಗುತ್ತೆದಾರ ವರ್ಗದ ವರದಿ ನೀಡಿದರು. ಸಂಘಚಾಲಕ ಬಸವರಾಜ ಡಂಬಳ, ವರ್ಗ ಕಾರ್ಯವಾಹ ಸುರೇಶ ಸಮಗಂಡಿ, ವರ್ಗದ ಮುಖ್ಯ ಶಿಕ್ಷಕ ವಿರೇಶ ಗುಡೂರು, ಪ್ರಮುಖರಾದ ಪ್ರಾಣೇಶ ಜೋಶಿ, ಶ್ರೀನಿಧಿ, ಮಹೇಶ ಗೊಂಡಬಾಳ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.