ADVERTISEMENT

ಆಲಿಕಲ್ಲು ಮಳೆ: ಮನೆ, ಬೆಳೆಗೆ ಹಾನಿ

ಹಾನಿ ಪ್ರದೇಶಕ್ಕೆ ಸರ್ಕಾರಿ ಅಧಿಕಾರಿಗಳು, ಪ್ರಮುಖರ ಭೇಟಿ: ಪರಿಶೀಲನೆ, ರೈತರಿಗೆ ಅಭಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 2:41 IST
Last Updated 30 ಏಪ್ರಿಲ್ 2022, 2:41 IST
ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್‌ ಮರ ಉರುಳಿ ಬಿದ್ದಿರುವುದು
ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್‌ ಮರ ಉರುಳಿ ಬಿದ್ದಿರುವುದು   

ಕಾರಟಗಿ: ತಾಲ್ಲೂಕಿನಾದ್ಯಂತ ಶುಕ್ರವಾರ ಭಾರಿ ಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಹಾನಿಗೀಡಾಗಿದ್ದು, ಅನೇಕ ಮನೆಗಳ ಶೆಡ್‌ಗಳು ಹಾರಿ, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಸಿದ್ದಾಪುರ ಹೋಬಳಿ ವ್ಯಾಪ್ತಿಯ ಗುಂಡೂರು, ಕೊಟ್ನೇಕಲ್, ಬರಗೂರು, ಜಮಾಪುರ, ಕೆ.ಜಿ. ಕ್ಯಾಂಪ್, ಸಿದ್ದಾಪುರ, ಲಕ್ಷ್ಮೀಕ್ಯಾಂಪ್, ರವಿನಗರ, ಉಳೇನೂರು, ಈಳಿಗನೂರು ಸಹಿತ ಇತರೆಡೆ ಭಾರಿ ಗಾಳಿ, ಆಲಿಕಲ್ಲು ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲದ ಪಾಲಾಗಿದೆ.

ಭತ್ತದ ನಾಟಿ, ಕ್ರಿಮಿನಾಶಕ, ರಸಗೊಬ್ಬರ, ಕಳೆ ಕೀಳುವುದಕ್ಕೆ ₹ 35 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದೆ.

ADVERTISEMENT

ಕಟಾವು ಮಾಡುವ ಹಂತದಲ್ಲಿದ್ದಾಗಲೇ ಸುರಿದ ಅಕಾಲಿಕ ಮಳೆಯಿಂದ ಬೆಳೆ ನೆಲದ ಪಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯು ರೈತರನ್ನು ತೀವ್ರ ಆತಂಕಕ್ಕೆ ದೂಡಿದೆ.

ಬೆಳೆ ತೀವ್ರ ಹಾನಿಗೀಡಾಗಿರುವ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡುವುದರೊಂದಿಗೆ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಬೆಳೆ ಹಾನಿಗೀಡಾದ ಅನೇಕ ರೈತರು ಆಗ್ರಹಿಸಿದ್ದಾರೆ.

ಮನೆ, ಜಾನುವಾರುಗಳಿಗೆ ಹಾನಿ: ಅಕಾಲಿಕ ಆಲಿಕಲ್ಲು ಮಳೆಯು ಒಂದೆಡೆ ರೈತರ ಬೆಳೆ ಹಾನಿ ಮಾಡಿದ್ದರೆ, ಇನ್ನೊಂದೆಡೆ ಅನೇಕ ಮನೆಗಳ ತಗಡಿನ ಶೀಟ್‌ಗಳು ಗಾಳಿಗೆ ಹಾರಾಡಿವೆ. ಸಿದ್ದಾಪುರದ ವಾರ್ಡ್‌ 5ರಲ್ಲಿ ಮನೆಯೊಂದರ ತಗಡುಗಳು ಹಾರಾಡಿ ಪಕ್ಕದ ಮನೆಗಳ ಮೇಲೆ ಬಿದ್ದಿವೆ. ತಾಲ್ಲೂಕಿನಲ್ಲಿ ಎರಡು ಜಾನುವಾರುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಕೆಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹದಾಕಾರದ ಮರ ಉರುಳಿ, ಕಾರು ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಜೆಸಿಬಿ ಯಂತ್ರ ಬಳಸಿ ಮರವನ್ನು ತೆರವುಗೊಳಿಸಲಾಯಿತು. ಯಾವುದೇ ಜೀವಹಾನಿಯ ಘಟನೆಗಳು
ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.