ADVERTISEMENT

ಕೈ ಮುಗಿದು ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 26 ಮೇ 2020, 2:13 IST
Last Updated 26 ಮೇ 2020, 2:13 IST
ಕುಷ್ಟಗಿಯಲ್ಲಿ ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ ಅವರು ಮನೆಯಲ್ಲಿ ಪ್ರಾರ್ಥನೆ ನೆರವೇರಿಸಿದರು
ಕುಷ್ಟಗಿಯಲ್ಲಿ ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ ಅವರು ಮನೆಯಲ್ಲಿ ಪ್ರಾರ್ಥನೆ ನೆರವೇರಿಸಿದರು   

ಕುಷ್ಟಗಿ: ಈದ್‌ ಉಲ್‌ ಫಿತ್ರ್ ಹಬ್ಬವನ್ನು ಮುಸ್ಲಿಮರು ಸೋಮವಾರ ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕೊರೊನಾ ಸೋಂಕು ಹರಡುವ ಕಾರಣಕ್ಕೆ ಈದ್ಗಾ ಮೈದಾನ, ಮಸೀದಿಗಳ ಬದಲು ತಮ್ಮ ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಸರ್ಕಾರದ ಲಾಕ್‌ಡೌನ್‌ ಸೂಚನೆಯನ್ನು ಗೌರವಿಸಿದರು.

ಅಲ್ಲದೆ ಕೈಕುಲುಕುವುದು, ಆಲಿಂಗನದ ಬದಲು ಪರಸ್ಪರ ಕೈ ಮುಗಿಯುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಈ ಬಾರಿ ಈದ್‌ ಹಬ್ಬವನ್ನು ಸರಳ ಮತ್ತು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಲ್ಲದೆ ಸೋಂಕಿನ ಸಂಕಷ್ಟದಿಂದ ಮಾನವ ಜನಾಂಗವನ್ನು ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು.

ಜಾಮಿಯಾ ಮಸೀದಿಯ ಅಧ್ಯಕ್ಷ ಸಯ್ಯದ್ ಮುರ್ತುಜಾ, ಹಬ್ಬ ಆಚರಣೆ ಸಂದರ್ಭದಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲಾಯಿತು, ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ನೆರವೇರಿಸಿದ್ದಾರೆ ಎಂದು ವಿವರಿಸಿದರು.

ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ ಸೇರಿ ಇತರ ಪ್ರಮುಖರು ಮನೆಯಲ್ಲಿ ಕುಟುಂಬದವರು, ಬೆರಳೆಣಿಕೆ ಆಪ್ತರೊಂದಿಗೆ ಪ್ರಾರ್ಥನೆಯಲ್ಲಿಪಾಲ್ಗೊಂಡಿದ್ದರು.

ಅದೇ ರೀತಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿಯೂ ಈದ್‌ ಉಲ್‌ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಹಿಂದೆ ಸಾಮೂಹಿಕ ಪ್ರಾರ್ಥನೆ ವೇಳೆ ಜನರಿಂದ ತುಂಬಿರುತ್ತಿದ್ದ ಈದ್ಗಾ ಮೈದಾನಗಳು ಭಣಗುಡುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.