ಕೊಪ್ಪಳ: ಕೃಷಿ ಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
‘ಸುಮಾರು 3 ತಿಂಗಳಿಂದ ನಮ್ಮ ದುಡಿಯುವ ಜನರು ಕೋವಿಡ್-19 ಲಾಕ್ಡೌನ್ನಿಂದಾಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಪೂರ್ವಸಿದ್ಧತೆ ಇಲ್ಲದೆ ದೇಶದ ಮೇಲೆ ಹೇರಲಾದ ಈ ನಿಯಮದಿಂದಾಗಿ ದೇಶದ ಕಾರ್ಮಿಕರು, ರೈತರು, ಕೂಲಿಕಾರರು, ವಲಸೆ ಕಾರ್ಮಿಕರು, ಮತ್ತೆಲ್ಲಾ ಗ್ರಾಮೀಣ ಬಡವರು ಅತೀವ ಸಂಕಷ್ಟಗಳಿಗೆ ಬಲಿಯಾಗಿದ್ದಾರೆ.
ಇದನ್ನು ತಡೆಯಲು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಜೂನ್ 4 ರಂದು ದೇಶಾದ್ಯಂತ ಮನವಿ ಸಲ್ಲಿಕೆಗೆ ಕರೆ ನೀಡಿದೆ. ಎಲ್ಲ ಕೂಲಿಕಾರರ ಕುಟುಂಬಗಳ ತಿಂಗಳಿಗೆ ₹ 7,500 ರಂತೆ ಕನಿಷ್ಟ 3 ತಿಂಗಳಿಗೆ ಆರ್ಥಿಕ ನೆರವು ನೀಡಬೇಕು. ಕೇರಳ ಮಾದರಿಯಲ್ಲಿ ಗುರುತಿನ ಚೀಟಿಗಳನ್ನು ವಿತರಿಸಬೇಕು.ವಲಸೆ ಕಾರ್ಮಿಕರ ಕುಟುಂಬಗಳಿಗೆ ವಿಶೇಷ ಆರ್ಥಿಕ ನೆರವು ಹಾಗೂ ಅಪಘಾತ, ಹಸಿವೆಯಿಂದ ಮತ್ತು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕರ ಅವಲಂಬಿತರಿಗೆ ಗರಿಷ್ಠ ಪರಿಹಾರ ನೀಡಬೇಕು.
ದಿನವೊಂದಕ್ಕೆ ₹ 600 ದರದಲ್ಲಿ ವರ್ಷದಲ್ಲಿ 200 ದಿನಗಳ ಉದ್ಯೋಗ ಖಾತ್ರಿ ಕೆಲಸ ಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಗಾಗಿ ಹೆಚ್ಚುವರಿಯಾಗಿ ₹ 1 ಲಕ್ಷ ಕೋಟಿ ಅನುದಾನ ನೀಡಬೇಕು.ಪ್ರತಿ ಕೂಲಿಕಾರರ ಕುಟುಂಬಕ್ಕೆ ಮುಂದಿನ 6 ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಅಥವಾ ಗೋದಿ ಮತ್ತು ಇತರ ಅಗತ್ಯ ವಸ್ತುಗಳನ್ನು ಉಚಿತವಾಗಿ ಯಾವುದೆ ರೇಷನ್ ಕಾರ್ಡ್ ಷರತ್ತುಗಳನ್ನು ವಿಧಿಸದೆ ನೀಡಬೇಕು.ಎಲ್ಲಾ ಬಡವರಿಗೆ ಮುಖ್ಯವಾಗಿ ಗ್ರಾಮೀಣ ಜನತೆಗೆ ಆರೋಗ್ಯ ತಪಾಸಣೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಾಜ್ಯಾಧ್ಯಕ್ಷನಿತ್ಯಾನಂದ ಸ್ವಾಮಿ, ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ, ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಸುಂಕಪ್ಪ ಗದಗ,ಬಸವಾರಾಜ್,ಬಾಳಪ್ಪ ಹುಲಿ ಹೈದರ್, ಹುಸೇನಪ್ಪ ಕೆ., ಅಂದಪ್ಪ ಬರದೂರ,ರಮೇಶ ಬಡಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.