ಯಲಬುರ್ಗಾ: ‘ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜದ ಅಭಿವೃದ್ಧಿಗೆ ಮೀಸಲಾತಿ ಅಗತ್ಯ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ಕೈಗೊಳ್ಳಲಾಗಿರುವ ಪಾದಯಾತ್ರೆಯನ್ನು ತಾಲ್ಲೂಕಿನ ಬಂಡಿ ಗ್ರಾಮದಲ್ಲಿ ಸಮಾಜದ ಗಣ್ಯರು ಅದ್ದೂರಿಯಾಗಿ ಬರಮಾಡಿಕೊಂಡರು.
ಸ್ವಾಮೀಜಿ ಜನರನ್ನು ಉದ್ದೇಶಿಸಿ ಮಾತನಾಡಿದರು.
‘ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬೇಡಿಕೆ ಕುರಿತು ಮನವರಿಕೆ ಮಾಡಲು ಸಮಾಜದ ಮುಖಂಡರಾದ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಸಿ.ಸಿ.ಪಾಟೀಲ ಅವರನ್ನು ಕಳುಹಿಸಲಾಗಿದೆ. ವಾಸ್ತವ ಸಂಗತಿಯನ್ನು ತಿಳಿಸಿ ಒಳ್ಳೆಯ ಸಂದೇಶ ತರುವ ವಿಶ್ವಾಸವಿದೆ’ ಎಂದರು.
ಜಿಲ್ಲಾ ಮುಖಂಡ ಕಳಕನಗೌಡ ಪಾಟೀಲ ಕಲ್ಲೂರು ಮಾತನಾಡಿ,‘ಮೀಸಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಮಾಜದ ಕೂಗಿಗೆ ಸರ್ಕಾರ ಸ್ಪಂದಿಸಬೇಕು. ಬಹುಸಂಖ್ಯಾತರಾಗಿದ್ದರೂ ಸಮಾಜದ ಜನ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರು ಇತರರಂತೆ ಬದುಕು ನಡೆಸಬೇಕಾದರೆ ಸರ್ಕಾರದ ಸೌಲಭ್ಯಗಳು ಸಿಗಬೇಕು’ ಎಂದು ಹೇಳಿದರು.
‘ಕೂಡಲೇ ಸಮಾಜದ ಹಿತಕ್ಕಾಗಿ 2ಎ ಮೀಸಲಾತಿ ನೀಡಬೇಕು.
ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.
ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸವಲಿಂಗಪ್ಪ ಭೂತೆ ಮಾತನಾಡಿ,‘ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಪಾಲ್ಗೊಂಡಿದ್ದಾರೆ.
ಸರ್ಕಾರಕ್ಕೆ ಸಮಾಜದ ಶಕ್ತಿ ಮನವರಿಕೆಯಾಗಿದೆ. ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ರಾಜ್ಯದ ಮುಖಂಡರೆಲ್ಲರೂ ಪಕ್ಷಬೇಧ ಮರೆತು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ’ ಎಂದರು.
ಪಾದಯಾತ್ರೆ ವೇಳೆ ವಿವಿಧ ಘೋಷಣೆಗಳನ್ನು ಕೂಗಲಾಯಿತು. ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.
ಸ್ಥಳೀಯ ಗಣ್ಯರಾದ ಅಡಿವೆಪ್ಪ ಭಾವಿಮನಿ, ರುದ್ರಗೌಡ ಸೊಲಬಗೌಡ್ರ, ಮಹಾಂತೇಶ ನೆಲಾಗಣಿ ಹಾಗೂ ಆನಂದ ಉಳ್ಳಾಗಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.