ತಾವರಗೇರಾ: ಬಳೂಟಗಿ-ಕುಡ್ಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಹಾಳಾಗಿರುವ ಕಾರಣ ಜನರು ದೂರದ ಮಾರ್ಗ ಬಳಸಿ ಮುದೇನೂರು ಮತ್ತು ಪಟ್ಟಣಗಳಿಗೆ ವಿವಿಧ ಕೆಲಸ ಕಾರ್ಯಗಳಿಗೆ ಹೋಗುವುದು ಸಾಮಾನ್ಯವಾಗಿದೆ.
ಕುಡ್ಲೂರು ಗ್ರಾಮದಿಂದ ಬಳೂಟಗಿ ಗ್ರಾಮಕ್ಕೆ ಕೇವಲ 3 ಕಿ.ಮೀ. ಅಂತರವಿದೆ. ಇದರ ಮಧ್ಯದಲ್ಲಿ ಟೆಂಗುಂಟಿ ಮಾರ್ಗವಾಗಿ ಹರಿದು ಬರುವ ದೊಡ್ಡ ಹಳ್ಳವಿದೆ. ಹಳ್ಳಕ್ಕೆ ಅಡ್ಡಲಾಗಿ ಪರಸ್ ನಿರ್ಮಿಸಲಾಗಿದೆ. ಈ ರಸ್ತೆ ಅರ್ಧ ಮುದೇನೂರು ಮತ್ತು ಇನ್ನೂಳಿದ ಅರ್ಧ ರಸ್ತೆ ಶಿರಗುಂಪಿ ಗ್ರಾ.ಪಂ. ಆಡಳಿತ ವ್ಯಾಪ್ತಿಗೆ ಒಳಪಡುತ್ತಿದೆ. ಸುಮಾರು 10ರಿಂದ 15 ವರ್ಷಗಳಿಂದ ನಿರ್ಮಿಸಲಾಗಿದ್ದ ಕಲ್ಲಿನ ನೆಲ ಪರಸ್ ಮಳೆಗೆ ಕೊಚ್ಚಿ ಹೋಗಿದೆ. 3 ಕಿ.ಮೀ.ವರೆಗೆ ಎರಡು ಬದಿಗೆ ಜಾಲಿಕಂಟಿಗಳು ಮರವಾಗಿ ಬೆಳೆದು ನಿಂತಿವೆ.
ಅಭಿವೃದ್ಧಿ ಹೆಸರಲ್ಲಿ ಹಣ ದುರ್ಬಳಕೆ: ಎರಡು ಗ್ರಾ.ಪಂ.ನಿಂದ ನಮ್ಮ ಹೊಲ ನಮ್ಮ ರಸ್ತೆ ಹಾಗೂ ನಾನಾ ಇಲಾಖೆಯಡಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಹಣ ಎತ್ತುವಳಿ ಮಾಡಿಕೊಂಡ್ಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಕಾಮಗಾರಿ ನೆಪದಲ್ಲಿ ರಸ್ತೆಗೆ ಬೇಕಾಬಿಟ್ಟಿಯಾಗಿ ಮರಂ, ಜಲ್ಲಿಕಲ್ಲು ಹಾಕಿ ಕೈತೊಳೆದುಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಸಂಚಾರಕ್ಕೆ ಅಡಚಣೆ: ಈ ರಸ್ತೆ ಮುಖ್ಯವಾಗಿ ನೂರಾರು ಜನ ರೈತರ ಕೃಷಿ ಚಟುವಟಿಕೆಗೆ ಸಂಪರ್ಕ ಕಲ್ಪಿಸುತ್ತದೆ. ಕುಡ್ಲೂರು, ಮಾದಾಪೂರ, ತೆಗ್ಗಿಹಾಳ ಜನರು ದೋಟಿಹಾಳ, ಇಲಕಲ್ಗೆ ಹೋಗಬೇಕಾದರೆ ಅತೀ ಸಮೀಪದ ರಸ್ತೆ ಇದಾಗಿದೆ. ಕುಡ್ಲೂರು ಜನರು ವಾಹನ ಮೂಲಕ ಸುಮಾರು 8 ಕಿ.ಮೀ. ಕ್ರಮಿಸಿಕೊಂಡು ಹೋಗಬೇಕಿದೆ. ಪಕ್ಕದ ಗ್ರಾಮ ತಲುಪಲು ಜನರು ಹರ ಸಾಹಸ ಪಡುತ್ತಿದ್ದಾರೆ.
ಅಭಿವೃದ್ಧಿ ಮರೀಚಿಕೆ: ಹಲವು ಯೋಜನೆಗಳಡಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ದಾಖಲೆಗಳಲ್ಲಿ ಮಾತ್ರ ಇದೆ. 2020 ಜೂನ್ 30 ರಂದು ಸಂಸದ ಸಂಗಣ್ಣ ಕರಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಚುನಾವಣಾ ಸಂದರ್ಭದಲ್ಲಿ ಹಲವು ಪಕ್ಷಗಳ ನಾಯಕರು ರಸ್ತೆ ಸುಧಾರಣೆಗೆ ನೀಡಿದ್ದ ಭರವಸೆ
ಹುಸಿಯಾಗಿದೆ. ಇದುವರೆಗೂ ಈ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ರಸ್ತೆ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಬಳೂಟಗಿ, ಕುಡ್ಲೂರು ಗ್ರಾಮಸ್ಥರು
ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.