ಕೊಪ್ಪಳ: ’ನಾನು 4 ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದು ವಿರೋಧ ಪಕ್ಷದವರು ಆರೋಪಿಸುವಂತೆ ಆಸ್ತಿ ಮಾಡಿದ್ದರೆ ಕೂಡಲೇ ಅವರು ತಾಯಿ ಹುಲಿಗೆಮ್ಮನ ದೇವಸ್ಥಾನಕ್ಕೆ ಬಂದು ಆಣೆ ಮಾಡಲಿ. ಅಲ್ಲಿ ಅವರ ಆಸ್ತಿ, ಸಾಲ ಎಷ್ಟು ಇದೆ ಎಂದು ಹೇಳಲಿ. ನಾನು ಸಹ ಎಲ್ಲವನ್ನೂ ಹೇಳುತ್ತೇನೆ. ಧೈರ್ಯ ಇದ್ದರೆ ಶಾಸಕ ರಾಘವೇಂದ್ರ ಹಿಟ್ನಾಳ ದೇವಸ್ಥಾನಕ್ಕೆ ಬರಲಿ‘ ಎಂದು ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಸವಾಲು ಹಾಕಿದರು.
ಮತದಾನದ ಮರುದಿನ ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಆಸ್ತಿ ಅಡ ಇಟ್ಟಿದ್ದು ನಿಜ. ಸಾಲ ಹೆಚ್ಚಾದ ಕಾರಣ ಆಸ್ತಿ ಅಡ ಇಟ್ಟಿದ್ದೇವೆಯೇ ಹೊರತಾಗಿ ಚುನಾವಣೆಗಾಗಿ ಅಲ್ಲ. ಇದು ಹೇಗೆ ಮಾಧ್ಯಮದವರಿಗೆ ಲೀಕ್ ಆಗಿದಿಯೋ ಗೊತ್ತಿಲ್ಲ. ಆಸ್ತಿ ಅಡ ಇಟ್ಟು ಯಾರೂಸಾಲ ಪಡೆದಿಲ್ಲವೇ ಎಂದು ಪ್ರಶ್ನಿಸಿದ ಅವರು, ಆಸ್ತಿ ಅಡ ಇಟ್ಟಿದ್ದು ಚುನಾವಣೆ ಗಿಮಿಕ್ ಎಂದು ಆರೋಪಿಸುವುದುಸರಿಯಲ್ಲ. ಗಿಮಿಕ್ ಮಾಡಲು ಬಹಳಷ್ಟು ವಿಷಯಗಳಿವೆಎಂದು ಹೇಳಿದರು.
ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇದಲ್ಲದೆ ನಾನು ಸಹ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಮೊತ್ತದ ಬೃಹತ್ ಯೋಜನೆಗಳನ್ನು ಜಾರಿಗೆ ತಂದಿರುವೆ ಎಂದು ಹೇಳಿದರು.
’ಉಜ್ವಲ ಯೋಜನೆಯಿಂದ ಕ್ಷೇತ್ರದಲ್ಲಿ 1.40 ಲಕ್ಷ ಜನರಿಗೆ ಅನುಕೂಲವಾಗಿದೆ. ಇವುಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಯಾರೇ ಮತ ಪಡೆದರೂ ಅಲ್ಪ ಮುನ್ನಡೆ ಪಡೆಯುತ್ತೇವೆ. ಉಳಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಪರ ಅಲೆ ಇದೆ. ಕ್ಷೇತ್ರದ ನಾಯಕರು, ಕಾರ್ಯಕರ್ತರು, ಮಹಿಳಾ ನಾಯಕರು ಸಾಕಷ್ಟು ಕೆಲಸ ಮಾಡಿದ್ದಾರೆ. ನಾನೆಂದೂ ಅವರ ಋಣ ತೀರಿಸಲು ಆಗದು. ಈ ಬಾರಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಿರೀಶ ಕಣವಿ ಮತ್ತು ಕುಟುಂಬದ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.