ADVERTISEMENT

ಅರಣ್ಯ ಸಂಪತ್ತು ಉಳಿಸಿ: ಅಮರೇಶ್ವರ ಶೆಟ್ಟರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 7:29 IST
Last Updated 10 ಅಕ್ಟೋಬರ್ 2021, 7:29 IST
ಕುಷ್ಟಗಿಯಲ್ಲಿ ‘ವಾಸವಿ ವನ ಸಪ್ತಾಹ’ಕ್ಕೆ ಅಮರೇಶ್ವರ ಶೆಟ್ಟರ ಚಾಲನೆ ನೀಡಿದರು
ಕುಷ್ಟಗಿಯಲ್ಲಿ ‘ವಾಸವಿ ವನ ಸಪ್ತಾಹ’ಕ್ಕೆ ಅಮರೇಶ್ವರ ಶೆಟ್ಟರ ಚಾಲನೆ ನೀಡಿದರು   

ಕುಷ್ಟಗಿ: ಅರಣ್ಯ ನಾಶದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಮರಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದು ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಪ್ರಯತ್ನ ಮಾಡಬೇಕಿದೆ ಎಂದು ಆರ್ಯವೈಶ್ಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಶ್ವರ ಶೆಟ್ಟರ್ ಹೇಳಿದರು.

ವಾಸವಿ ಯುವಜನ ಮಹಾಸಭಾ ವತಿಯಿಂದ ಇಲ್ಲಿಯ ವಾಸವಿ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ‘ವಾಸವಿ ವನ ಸಪ್ತಾಹ’ದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಕಾಳಜಿಯತ್ತ ವಾಸವಿ ಯುವಜನ ಸಂಘದ ಸದಸ್ಯರು ನಡೆಸಿರುವ ಪ್ರಯತ್ನ ಮಾದರಿಯಾಗಿದೆ ಎಂದರು.

‘ಕುರುಚಲು ಕಾಡುಗಳನ್ನು ಉಳಿಸಿಕೊಳ್ಳುವುದರಿಂದ ಅನೇಕ ವನ್ಯಜೀವಿಗಳಿಗೂ ಆಶ್ರಯ ದೊರಕಿಸಿಕೊಟ್ಟಂತಾಗುತ್ತದೆ. ಔಷಧ ಸಸ್ಯಗಳನ್ನು ಬೆಳೆಸುವುದರಿಂದ ಬಹಳಷ್ಟು ಪ್ರಯೋಜಗಳಿವೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಜಿ.ಪಿ.ನಾಗೇಶ ಮಾತನಾಡಿ, ಒಟ್ಟು 10 ಸಾವಿರ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದ್ದು, ಕುಷ್ಟಗಿಯಲ್ಲಿಯೂ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಸಂಘದ ಯುವಕರ ಪರಿಸರದ ಮೇಲಿನ ಪ್ರೇಮ ಇತರರಿಗೂ ಪ್ರೇರಣೆಯಾಗಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಘಟಕದ ವಾಸವಿ ಯುವಜನ ಮಹಾಸಭಾ ಮಾಜಿ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ, ಕುಷ್ಟಗಿ ವಾಸವಿ ಯುವಜನ ಸಂಘದ ಅಧ್ಯಕ್ಷ ಉಮೇಶ್‌, ಹಿರೇವಂಕಲಕುಂಟಾ ವಾಸವಿ ಯುವಜನ ಸಂಘದ ರಂಗನಾಥ, ವಿಜಯನಗರ ವಿಭಾಗದ ನಿರ್ದೇಶಕ ವೆಂಕಟೇಶ ತಮ್ಮಿನಾಳ ಸೇರಿದಂತೆ ವಾಸವಿ ಯುವಜನ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.