ಗಂಗಾವತಿ: ಭತ್ತದ ಸಸಿ ಮಡಿಗಳಲ್ಲಿ ಕಣೆ ನೊಣ ಕಾಣಿಸಿಕೊಂಡ ಕಾರಣ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ತಾಲ್ಲೂಕಿನ ದಾಸನಾಳ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೀಟಶಾಸ್ತ್ರ ವಿಜ್ಞಾನಿ ಡಾ.ರಾಘವೇಂದ್ರ ಎಲಿಗಾರ ಮಾತನಾಡಿ,‘ಈಗಾಗಲೇ ರೈತರು ಎರಡನೇ ಬೆಳೆಗೆ ಭತ್ತದ ಸಸಿ ಮಡಿ ತಯಾರು ಮಾಡಿದ್ದಾರೆ. 15 ರಿಂದ 20 ದಿನಗಳ ಸಸಿ ಇದೆ. ಗಂಗಾವತಿ, ಕಂಪ್ಲಿ, ಇಟಗಿ, ಉಳೆನೂರು, ಮುಷ್ಟೂರು, ಬಸಾಪಟ್ಟಣ ಹಾಗೂ ಸಿದ್ದಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಸಿ ಮಡಿಯಲ್ಲಿ ಕಣೆ ನೊಣ ಬಾಧೆ ಕಂಡುಬಂದಿದೆ’ ಎಂದು ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗೆ ಕಣೆ ನೊಣ ಬಾಧೆ ಕಂಡು ಬಂದಿತ್ತು. ಇದೀಗ ಸಸಿ ಮಡಿಗಳಲ್ಲಿ ಕಂಡುಬಂದಿದೆ. ಆದ್ದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಸಸಿ ಮಡಿಗೆ, ಹರಳು ರೂಪದ ಕೀಟ ನಾಶಕ ಫಿಫ್ರೊನೀಲ್ 3ಜಿ ಯನ್ನುಒಂದು ಎಕರೆಗೆ ಒಂದು ಕೆ.ಜಿ ಹಾಕಬೇಕು. ಥಯೋಮಿಥಾಕ್ಸಮ್ 0.25 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ವಿ ರವಿ, ಸಹಾಯಕ ಕೃಷಿ ನಿರ್ದೆಶಕ ತಿಪ್ಪೇಸ್ವಾಮಿ, ಕೃಷಿ ಅಧಿಕಾರಿ ಗೋರಖನಾಥ ಹಾಗೂ ರೈತ ಲಕ್ಷ್ಮಣ ರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.