ಗಂಗಾವತಿ: ರಾಮನಗರ ಜಿಲ್ಲೆಯ ಬಿಡದಿ ಬಳಿ ನಡೆದ 14 ವರ್ಷದ ಮೂಕ ಬಾಲಕಿ ಮೇಲಿನ ಅತ್ಯಾಚಾರ ಖಂಡನೀಯ. ತಪ್ಪಿತಸ್ಥರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಎಸ್ಎಫ್ಐ ಗಂಗಾವತಿ ತಾಲ್ಲೂಕು ಸಮಿತಿ ಸದಸ್ಯರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ನಾಗರಾಜ.ಯು ಮಾತನಾಡಿ, ಬೆಂಗಳೂರು ಬಿಡದಿ ಬಳಿ ಬಾಲಕಿ ಮೇಲೆ ಅತ್ಯಾಚಾರ ನಡೆದು ದಿನಗಳು ಉರುಳುತ್ತಿದ್ದರೂ ಈವರೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುತ್ತಿಲ್ಲ. ಬಾಲಕಿ ಕಾಣೆ ಬಗ್ಗೆ ಏಪ್ರಿಲ್ 11ರಂದು ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಹುಡುಕಾಟದ ಪ್ರಯತ್ನ ನಡೆಸಲಿಲ್ಲ. 12ರಂದು ಬಿಡದಿ ರೈಲ್ವೆ ಹಳಿ ಬಳಿ ಬಾಲಕಿ ಮೃತದೇಹ ದೊರೆತಿದ್ದು, ದೇಹ ಸಿಗರೇಟಿನಿಂದ ಸುಡಲಾಗಿತ್ತು. ಬಲವಾದ ಏಟು, ಬಾಯಿಂದ ಕಚ್ಚಿದ, ವಸ್ತುವಿನಿಂದ ಹೊಡೆದ ಗುರುತುಗಳಿದ್ದವು. ಕುತ್ತಿಗೆ ಮುರಿದು, ಕಾಲುಗಳು ತಿವಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಪೊಲೀಸರು ಸೂಕ್ತ ಪ್ರಕರಣ ದಾಖಲಿಸಿಕೊಳ್ಳದೇ, ಬಾಲಕಿ ಕುಟುಂಬಸ್ಥರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆ ಎಂದು ದೂರಿದರು.
ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ಬಾಲಕಿ ಕುಟುಂಬಸ್ಥರನ್ನ ಪೊಲೀಸರು ವಿಚಾರಣೆ ನೆಪದಲ್ಲಿ ಗೂಡ್ಸ್ ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ. ಸರ್ಕಾರ ಈ ಪ್ರಕರಣ ಸೂಕ್ತ ತನಿಖೆಗೆ ವಿಶೇಷ ತಂಡ ರಚಿಸಿಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಬಲಾಜಿ, ಕೂಲಿಕಾರರ ಸಂಘದ ಮುಖಂಡ ಹುಸೇನಪ್ಪ, ಸಿಐಟಿಯು ಮುಖಂಡ ಮಂಜುನಾಥ, ಬಾಳಪ್ಪ, ಶರೀಫ, ರಮೇಶ, ಶರಣಬಸವ, ಮಾರುತಿ, ಮಹೇಶ, ಅಜಯ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.