ಯಲಬುರ್ಗಾ: ಉತ್ತಮ ಆರೋಗ್ಯಯುಕ್ತ ಪರಿಸರದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದಲೇ ಸ್ಥಾಪಿತವಾಗಿರುವ ವಸತಿ ಶಾಲೆಗಳಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿನ ವಾತಾವರಣಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದು ಎಸ್ಎಫ್ಐ ಮುಖಂಡರು ತಿಳಿಸಿದರು.
ಸಂಘಟನೆಯ ಪದಾಧಿಕಾರಿಗಳು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿದೆ. ಮಕ್ಕಳ ಅಭ್ಯಾಸಕ್ಕೆ ತೊಂದರೆ ಕೊಡುವುದು ಸರಿಯಲ್ಲ, ಆರೈಕೆ ಕೇಂದ್ರಕ್ಕೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಶಾಲೆಯಲ್ಲಿ ಕೇಂದ್ರವನ್ನು ತೆರೆಯಬಾರದು ಎಂದು ಒತ್ತಾಯಿಸಿದರು.
ಈಗಾಗಲೇ ವಿವಿಧ ಕಾರಣಗಳಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರುಪೇರಾಗಿದೆ. ಕಾರಣ ಸರ್ಕಾರ ಬೇರೆ ಸ್ಥಳಗಳಲ್ಲಿ ಕೇಂದ್ರಗಳನ್ನು ತೆರೆದು ವಸತಿ ಶಾಲೆಗಳಲ್ಲಿ ಮಕ್ಕಳು ನೆಮ್ಮದಿಯಿಂದ ಉತ್ತಮ ಆರೋಗ್ಯಯುಕ್ತ ವಾತಾವರಣದಲ್ಲಿ ಅಭ್ಯಾಸಕ್ಕೆ ಅನುಕೂಲಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನೇತೃತ್ವ ವಹಿಸಿದ್ದ ಎಂ.ಸಿದ್ದಪ್ಪ ಅವರು ಕೂಡಲೇ ಈ ಆದೇಶವನ್ನು ರದ್ದುಪಡಿಸಿ ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ರಾಮಣ್ಣ ಹಿರೇಮನಿ, ಮಹಾಂತೇಶ ತೂಗುರಾಣಿ, ಕನಕಪ್ಪ, ಭೀಮಣ್ಣ, ಚಂದ್ರು, ಈರಪ್ಪ, ಶೇಖರಪ್ಪ ಗುರಾಣಿ, ಯಲ್ಲಪ್ಪ, ಮಲ್ಲೇಶಪ್ಪ, ವಿರೇಶ, ಸುರೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.