ಕೊಪ್ಪಳ: ಎಲ್ಕೆಜಿಯಿಂದ ಹಿಡಿದು ಎಂಎಸ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಆರಂಭಿಸುವ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಸಲಹೆ ನೀಡಿದರು.
ಅವರು ಸಮೀಪದ ಕಿಡದಾಳ ಗ್ರಾಮದಲ್ಲಿ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್ನ ಶಾರದಾ ಉತ್ಸವದ ಪ್ರಯುಕ್ತ 'ಉತ್ತರ ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ ವೈಭವ'ದಲ್ಲಿ ಶಾಲೆಯ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿಯೇ ಗ್ರಂಥಾಲಯಕ್ಕೆ ಭಾರತ ವಿಶಿಷ್ಟ ಸ್ಥಾನ ನೀಡಿದೆ. ಶರಣರ ವಚನಗಳ ಸಲುವಾಗಿ ಯುದ್ಧವನ್ನೇ ಮಾಡಿದರು. ಬಿಜ್ಜಳ ಸೈನ್ಯ ವಚನಗಳನ್ನು ಹುಡುಕಲು ಸೇನೆಯನ್ನೇ ರವಾನಿಸಿತ್ತು. ಆದರೆ ವೈರಿಗಳ ಕೈಗೆ ಸಿಗದ ಹಾಗೆ ಜನರ ಬಾಯಲ್ಲಿ ಭದ್ರ ಮಾಡಿ ಶರಣರು ಕಗ್ಗಾಡು ಉಳಿವಿಗೆ ಹೋಗಿ, ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ಬಂದರು. ಬೀದರ್ ಮಹಮ್ಮದ್ ಗವಾನನ ಗ್ರಂಥಾಲಯರೋಮ್ ಗ್ರಂಥಾಲಯಕ್ಕಿಂತಲೂ ಹೆಸರುವಾಸಿಯಾಗಿತ್ತು. ಪುಸ್ತಕ ಕಳ್ಳತನ ಎಂಬುವುದು ಸುಸಂಸ್ಕೃತ ಕಳ್ಳತನವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಈ ಭಾಗದಲ್ಲಿ ಅದ್ಭುತ ಎನ್ನುವಂತೆ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಈಗ ಗ್ರಂಥಾಲಯ ಕಲ್ಪನೆ ಬದಲಾಗಿದೆ. ಡಿಜಿಟಲ್ ಆಗಿದೆ. ಮೊಬೈಲ್ನಲ್ಲಿ ನೋಡಬಹುದು. ಇದರಿಂದ ಶಾಶ್ವತವಾಗಿ ಸಾಹಿತ್ಯ ಸಂಗ್ರಹವಾಗುತ್ತಿದೆ. ಆದ್ದರಿಂದ ಹಣವಿದ್ದವರು ಕನ್ನಡ ಮಾಧ್ಯಮದಲ್ಲಿಯೇ ವಿಶ್ವವಿದ್ಯಾಲಯವನ್ನು ಆರಂಭಿಸಿದರೆ ನಿಮ್ಮನ್ನು ನಾವು ಹೊತ್ತು ತಿರುಗುತ್ತೇವೆ ಎಂದು ಹೇಳಿದರು.
ನಂತರ ಡಾ.ಕಂಬಾರ 'ಪಠ್ಯಕ್ರಮ, ದೇಶಾಭಿಮಾನ, ಕೌಶಲಾಧಾರಿತ ಶಿಕ್ಷಣ'ದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಖ್ಯಾತ ನಿರೂಪಕ ಶಂಕರ ಪ್ರಕಾಶ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.