
ಕೊಪ್ಪಳ: ‘ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜ್ಯದಲ್ಲಿ ಮಾದಿಗ ಸಮಾಜದ ಸಂಘಟನೆ, ಶೈಕ್ಷಣಿಕ ಕ್ರಾಂತಿ, ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಕಾಯಕ ಮಾಡುತ್ತಿದ್ದಾರೆ. ಅವರ ಕಾಯಕ ಸಾರ್ಥಕವಾಗಬೇಕಾದರೆ ಮಾದಿಗ ಸಮಾಜ ಇತರೆ ಎಲ್ಲ ವರ್ಗದವರ ಜೊತೆ ಅವಿನಾಭಾವ ಸಂಬಂಧ ಬೆಳೆಸಿಕೊಂಡು ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಮಾದರ ಚೆನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಮಾದರ ಚೆನ್ನಯ್ಯ ಸೇವಾ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ‘ಮುಂಬರುವ ಯುವ ಪೀಳಿಗೆಗೆ ನಾವೆಲ್ಲರೂ ದಾರಿದೀಪವಾಗಬೇಕು, ಸಮಾಜದ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸಬೇಕು, ತಳಮಟ್ಟದಿಂದ ಸಂಘಟನೆ ಬಲಪಡಿಸಲು ಪರಸ್ಪರ ಕೈ ಜೋಡಿಸಬೇಕು. ಮಾದಿಗ ಸಮುದಾಯದ ಪರಂಪರೆ, ಇತಿಹಾಸ, ಕಾಯಕ ಸಂಸ್ಕೃತಿಯನ್ನು ಮಾದಿಗರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ವಸಂತ್ ಭಾವಿಮನಿ, ಆನಂದ್ ಕಾರಟಗಿ, ಗುತ್ತಿಗೆದಾರ ಹನುಮೇಶ ಕಡೇಮನಿ, ಮೌನೇಶ್ ದಢೇಸುಗೂರು, ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಹೊಸಮನಿ, ನಾಗರಾಜ್ ತಲ್ಲೂರ್, ಮುಖಂಡರಾದ ಎಚ್.ಎಸ್. ಹೊನ್ನುಂಚಿ, ಮಲಿಯಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ಪೂಜಾರ, ಯಲ್ಲಪ್ಪ ಹಳೆಮನೆ, ನಾಗಲಿಂಗ ಮಾಳೆಕೊಪ್ಪ, ಮಹಾಲಕ್ಷ್ಮಿ ಕಂದಾರಿ, ಶಿವಪ್ಪ ಮಾದಿಗ, ಪ್ರಕಾಶ ಒಡೆಯಪ್ಪನವರ, ನಾಗರಾಜ ನಂದಾಪುರ, ಹನುಮಂತಪ್ಪ ಮುತ್ತಾಳ, ಚಂದ್ರುಸ್ವಾಮಿ ಹೊಸಮನಿ, ಯಮನೂರಪ್ಪ ಕುಷ್ಟಗಿ, ನಿಂಗಜ್ಜ ಬಣಕಾರ್, ದೇವರಾಜ್ ಬಟಪ್ಪನಹಳ್ಳಿ, ದೇವರಾಜ್ ಹೊರತಟ್ನಾಳ ಪಾಲ್ಗೊಂಡಿದ್ದರು.
ಸ್ವಾಮೀಜಿಯ ಹಾದಿಯಲ್ಲಿ ನಾವೆಲ್ಲರೂ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಮಾದಿಗ ಸಮುದಾಯದ ಅಭಿವೃದ್ಧಿಗೆ ತನು-ಮನ ಧನದಿಂದ ಸಹಕಾರ ನೀಡಬೇಕು.ಈರಪ್ಪ ಕುಡುಗುಂಟಿ ಸೇವಾ ಸಮಿತಿಯ ರಾಜ್ಯ ಸದಸ್ಯ
ಮಾದಿಗ ಸಮಾಜ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಂಘಟಿತರಾಗಬೇಕು. ರಾಜಕೀಯವಾಗಿ ಯಾವುದೇ ಪಕ್ಷದಲ್ಲಿದ್ದರೂ ಸಮುದಾಯದ ವಿಷಯದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು.ಗೂಳಪ್ಪ ಹಲಿಗೇರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.