ಗಂಗಾವತಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದೂ ತಾವು ದೇವರಾಜ ಅರಸು ಎಂದು ಹೇಳಿಲ್ಲ. ಜನರು ಸಿದ್ದರಾಮಯ್ಯ ಅವರನ್ನು ದೇವರಾಜ ಅರಸುರಂತೆ ಕಾಣಲು ಪ್ರಯತ್ನಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ಸಿಎಂ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ನೇರವಾಗಿ ನಾನು ದೇವರಾಜ ಅರಸು ಆಗಲಿಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿದ್ದಾರೆ’ ಎಂದರು.
ಆದರೆ ಜನರು ಸಿದ್ದರಾಮಯ್ಯ ತುಳಿದ ಹಾದಿ ಹಾಗೂ ದೇವರಾಜ ಅರಸು ನಡೆದ ಹಾದಿ ಎರಡು ಸಮೀಪ ಇವೆ ಎಂದು ತಿಳಿಯುತ್ತಿದ್ದಾರೆ. ನಾನು ಸಹ ಸಾಕಷ್ಟು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿ ಸಿದ್ದರಾಮಯ್ಯ ಅವರನ್ನು 2ನೇ ದೇವರಾಜ ಅರಸು ಎಂದು ಕರೆದಿದ್ದೇನೆ. ಏನೇನೊ ಕಲ್ಪಿಸುವುದು ಸರಿಯಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಗತ್ತು ಹಾಗೂ ಆಡಳಿತದ ಗಾಂಭೀರ್ಯತೆ ಇದೆ. ಎಲ್ಲ ಸಮಾಜದವರನ್ನು ಜತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್, ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯಕ್ಕೆ ಕಾಂಗ್ರೆಸ್ ಆದ್ಯತೆ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಈಡಿಗ ಸಮಾಜದಿಂದ ಮಧು ಬಂಗಾರಪ್ಪ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ. ಮುಂದೆ ಹರಿಪ್ರಸಾದ್ ಅವರನ್ನು ಕರೆಸಿ ಮಾತನಾಡುತ್ತಾರೆ ಎಂದರು.
ಗಂಗಾವತಿ, ಕನಕಗಿರಿ ತಾಲ್ಲೂಕಿನಲ್ಲಿ ಮರಳು ಅಕ್ರಮ ಸಾಗಣೆ, ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಇಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ,‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ಎಲ್ಲವನ್ನು ಹತೋಟಿಗೆ ತರಲಾಗಿದೆ. ಪರವಾನಗಿ ಇದ್ದವುಗಳಿಗೆ ಅವಕಾಶ ನೀಡಿ, ಉಳಿದವುಗಳನ್ನು ಶಾಶ್ವತವಾಗಿ ಬಂದ್ ಮಾಡಿಸಲಾಗುವುದು’ ಎಂದು ಹೇಳಿದರು.
ಇದೆ ವಿಷಯಕ್ಕೆ ಸಂಬಂಧಿಸಿದಂತೆ ಸೆ.17 ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ, ಎಸ್ಪಿ, ಡಿವೈಎಸ್ಪಿ ಅವರನ್ನು ಕರೆದು ಸಭೆ ನಡೆಸಲಾಗುತ್ತದೆ. ಇಸ್ಪೀಟ್, ಮಟ್ಕಾ ಬಂದ್ ಮಾಡಿಸಿದ್ದಕ್ಕೆ ಕೆಲ ರಿಕ್ರಿಯೇಷನ್ ಕ್ಲಬ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.