ADVERTISEMENT

ಆಮೆಗತಿಯ ಕಾಮಗಾರಿ: ಸವಾರರಿಗೆ ಕಿರಿಕಿರಿ

ದೂಳಿನಲ್ಲಿಯೇ ನಡೆಯುತ್ತಿದೆ ವ್ಯಾಪಾರ–ವಹಿವಾಟು: ಅಧಿಕಾರಿಗಳಿಗೆ ಶಾಪ ಹಾಕುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:35 IST
Last Updated 24 ಡಿಸೆಂಬರ್ 2025, 4:35 IST
ಅಳವಂಡಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಅಳವಂಡಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಅಳವಂಡಿ: ಪಟ್ಟಣದಿಂದ ಬೆಳಗಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಅಳವಂಡಿ–ಬೆಳಗಟ್ಟಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿತ್ತು. ರಸ್ತೆ ಅಭಿವೃದ್ಧಿ ಕಾಮಗಾರಿಗೆ 2024ರ ಜುಲೈ 28ರಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ಅವರು ಅಡಿಗಲ್ಲು ನೆರವೇರಿಸಿದ್ದರು. ಲೋಕೋಪಯೋಗಿ ಇಲಾಖೆ ಕಾಮಗಾರಿಯ ಹೊಣೆ ಹೊತ್ತಿದೆ.

ಅಳವಂಡಿ ಗ್ರಾಮದ ಮುಖ್ಯ ರಸ್ತೆ ವಿಸ್ತರಣೆ ಮಾಡಲಾಗಿದೆ. ಅಳವಂಡಿ ನಡುವೆ ಅರ್ಧಭಾಗ ಅಷ್ಟೇ ಸಿಸಿ ರಸ್ತೆ ನಿರ್ಮಿಸಿದ್ದು, ಇನ್ನೂ ಅರ್ಧ ರಸ್ತೆ ಸಿಸಿ ರಸ್ತೆ ನಿರ್ಮಿಸುವ ಕಾರ್ಯ ವೇಗ ಪಡೆದುಕೊಳ್ಳುತ್ತಿಲ್ಲ. ಬಸ್ ನಿಲ್ದಾಣದ ಹತ್ತಿರ ಹಲವಾರು ವ್ಯಾಪಾರಸ್ಥರು ಅಂಗಡಿ–ಮುಂಗಟ್ಟುಗಳನ್ನು ಇಟ್ಟುಕೊಂಡಿದ್ದರು. ರಸ್ತೆ ವಿಸ್ತರಣೆ ಮಾಡುವ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ತೆರವುಗೊಳಿಸುವಲ್ಲಿ ತೋರಿದ ಆತುರವನ್ನು ರಸ್ತೆ ಅಭಿವೃದ್ಧಿಗೆ ತೋರಿಸುತ್ತಿಲ್ಲ ಎಂದು ಜನ ಆರೋಪಿಸುತ್ತಾರೆ.

ADVERTISEMENT

‘ರಸ್ತೆ ಕಾಮಗಾರಿಯಿಂದ ನಿತ್ಯ ದೂಳಿನಲ್ಲಿ ಅಂಗಡಿ ನಡೆಸುತ್ತಿದ್ದೇವೆ. ರಸ್ತೆ ಅಭಿವೃದ್ಧಿ ಕಾಮಗಾರಿ ಬೇಗನೆ ಮುಗಿಯುತ್ತಿಲ್ಲ. ಇದರಿಂದ ವ್ಯಾಪಾರ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಒಂದು ಕಡೆ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೂ, ಅವಾಗೊಮ್ಮೆ ಇವಾಗೊಮ್ಮೆ ಅಷ್ಟೇ ನೀರು ಹೊಡೆಯುತ್ತಾರೆ. ಇದರಿಂದಾಗಿ ಮತ್ತಷ್ಟು ದೂಳಿನಲ್ಲಿ ಅಂಗಡಿ ನಡೆಸುವ ಅನಿವಾರ್ಯ ಎದುರಾಗಿದೆ’ ಎನ್ನುತ್ತಾರೆ ಹೋಟೆಲ್ ಮಾಲಿಕ ಶಂಕ್ರಪ್ಪ ಹಕ್ಕಂಡಿ.

ರಸ್ತೆ ಕಾಮಗಾರಿ ವೇಗ ಪಡೆದುಕೊಳ್ಳದ ಕಾರಣ ವಾಹನ ಸವಾರರು, ಪಾದಚಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ರಸ್ತೆ ಬದಿಯಲ್ಲಿರುವ ಅಂಗಡಿಗಳ ವ್ಯಾಪಾರಸ್ಥರು ನಿತ್ಯ ದೂಳಿನಲ್ಲಿ ಮಿಂದೇಳಬೇಕಾಗಿದೆ.

ಅಳವಂಡಿಯಿಂದ ಬೆಳಗಟ್ಟಿವರೆಗೂ ನಡೆಯುತ್ತಿರುವ ಈ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಳವಂಡಿ ಮುಖ್ಯರಸ್ತೆ ಸಂಪೂರ್ಣ ದೂಳಿನಿಂದ ಕೂಡುತ್ತಿದ್ದು, ಹಾಗಾಗಿ ದೂಳಿನ ವಾತಾವರಣ ನಿರ್ಮಾಣವಾಗಿದೆ. ರಸ್ತೆ ವಿಸ್ತರಣೆ ಮಾಡಲು ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೆ, ರಸ್ತೆ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ.

ಈಗಲಾದರೂ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಬೇಗ ರಸ್ತೆ ಅಭಿವೃದ್ಧಿ ಮಾಡಿ ಸವಾರರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಮಾಡಬೇಕು ಎಂದು ಗ್ರಾಮಸ್ಥರಾದ ಮಂಜುನಾಥಗೌಡ, ವಿರುಪಾಕ್ಷಪ್ಪ ಜೋಳದ, ಗೂಳರಡ್ಡಿ ಒತ್ತಾಯಿಸುತ್ತಾರೆ.

ಕೂಡಲೇ ಇನ್ನುಳಿದ ಕಾಮಗಾರಿ ಆರಂಭ ಮಾಡಿ ಪೂರ್ಣಗೊಳಿಸಲಾಗುವುದು. ದೂಳಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು
ಶರಣಬಸಪ್ಪ ಜೆಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.