ಕೊಪ್ಪಳ: ಖಾಸಗಿ ಶಿಕ್ಷಣ ಸಂಸ್ಥೆಗಳು ಕೋವಿಡ್ನಿಂದಾಗಿ ಸಾಕಷ್ಟು ಸಂಕಷ್ಟಗೊಳಗಾಗಿವೆ. ಇದನ್ನು ಸಾಕಷ್ಟು ಬಾರಿ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸುವ ಬದಲು ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುವುದರ ಮುಖಾಂತರ ಬಜೆಟ್ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಗೆ ತಂದಿದ್ದಾರೆ ಎಂದುಕಲ್ಯಾಣ ಕರ್ನಾಟಕ ಶಾಲಾ ಆಡಳಿತ ಮಂಡಳಿ ಹಾಗೂ ತಾಲ್ಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ)ದ ಪದಾಧಿಕಾರಿಗಳು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿಸಮಸ್ಯೆ ಹೇಳಿಕೊಂಡರು.
ಅವರು ಭಾನುವಾರ ಬಳ್ಳಾರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ವಿರೇಶ ಮಹಾಂತಯ್ಯನಮಠ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ಸಂಘಟನೆಯು ವಿವಿಧ ಬೇಡಿಕೆಗಳಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ.1995ರ ನಂತರದ ಕನ್ನಡ ಮಾಧ್ಯಮ, ಉರ್ದು, ಮರಾಠಿ, ತೆಲುಗು ಮತ್ತು ಇತರೆ ಪ್ರಾದೇಶಿಕ ಮಾತೃಭಾಷಾ ಶಿಕ್ಷಣ ಸಂಸ್ಥೆಗಳಿಗೆ ಅನುದಾನಕ್ಕೊಳಪಡಿಸುವ ಮೂಲಕ 25 ವರ್ಷಗಳಿಂದ ಕಾಯುತ್ತಿರುವ ಶಿಕ್ಷಕರನ್ನು ರಕ್ಷಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ಟ್ರಸ್ಟ್ ಕಲಬುರಗಿಯಿಂದ ಈ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಮನವಿ ಮಾಡಿದರು.
ಅಗತ್ಯ ಸಹಾಯ ಧನವನ್ನು ನೀಡಬೇಕು, ಶಾಲೆಗಳ ನವೀಕರಣ ಅಧಿಕಾರವನ್ನು ಈ ಮೊದಲನಂತೆ ಬಿಇಓಗಳಿಗೆ ನೀಡಬೇಕು ಮತ್ತು ಅನಗತ್ಯ ದಾಖಲೆಗಳಿಗಾಗಿ ಶಾಲೆಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಕ್ತಾವಾಗಿ ಸಾರ್ವಜನಿಕ ವಲಯದಲ್ಲಿ, ಅನೇಕ ಶಿಕ್ಷಣ ತಜ್ಞರೊಂದಿಗೆ, ಖಾಸಗೀ ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಲಗಳ ಸಂಘಗಳೊಂದಿಗೆ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೇ ಜಾರಿಗೆ ತರಬಾರದು ಸೇರಿದಂತೆ ಇತರರ ವಿಷಯಗಳ ಕುರಿತು ಸರ್ಕಾರದ ಗಮನಕ್ಕೆ ತರುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ತಾಲ್ಲೂಕುಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಶಾಹೀದ್ ತಹಶೀಲ್ದಾರ್ ಕವಲೂರು, ಕಾರ್ಯದರ್ಶಿ ನಾಗರಾಜ ಗುಡಿ, ಸಹ ಕಾರ್ಯದರ್ಶಿ ಸಂದೇಶ ಪಟ್ಟಣಶೆಟ್ಟಿ, ಶಿವನಗೌಡ ಪೋ.ಪಾ. ವೀರಣ್ಣ ಕಂಬಳಿ, ಶಿವಾನಂದ ಎಲ್ಲಮ್ಮನವರ್, ಫಕೀರಪ್ಪ ಎಮ್ಮಿಯವರ, ಮಲ್ಲಿಕಾರ್ಜುನ ಎಸ್.ಎಚ್.ವಿಜಯ, ರಾಘವೇಂದ್ರ ಸೇರಿದಂತೆಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.