ಹನುಮಸಾಗರ: ಪರೀಕ್ಷಾ ಕೇಂದ್ರದಲ್ಲಿ ಸುರಕ್ಷಿತ ವ್ಯವಸ್ಥೆ ಮಾಡಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು. ಈ ಬಾರಿ ಪರೀಕ್ಷಾ ವಿಧಾನ ಬದಲಾಗಿರುವ ಮಾಹಿತಿಯನ್ನು ಮೇಲ್ವಿಚಾರಕರು ತಿಳಿದುಕೊಳ್ಳಬೇಕು ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕ ಹುಸೇನಸಾಬ ಇಲಕಲ್ಲ ಹೇಳಿದರು.
ಶನಿವಾರ ಇಲ್ಲಿನ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿಮಿತ್ತ ಕೊಠಡಿ ಮೇಲ್ವಿಚಾರಕರಿಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪ್ರತಿ ವಿಷಯಕ್ಕೂ 40 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಇರುತ್ತದೆ. ಜು.19 ರಂದು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳಿಗೆ ಒಟ್ಟು 120 ಅಂಕಗಳಿಗೆ ಒಂದು ಪೇಪರ್ ಇರುತ್ತದೆ. ಜು.22 ರಂದು ಭಾಷಾ ವಿಷಯಗಳಿಗೆ ಒಟ್ಟು 120 ಅಂಕಗಳಿಗೆ ಒಂದು ಪೇಪರ್ ಇರುತ್ತದೆ. ಅಲ್ಲದೇ ಒಂದು ಕೊಠಡಿಗೆ 12 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಿ ಪರೀಕ್ಷೆ ನಡೆಸಲಾಗುತ್ತದೆ.
ಈ ಪರೀಕ್ಷಾ ಕೇಂದ್ರದಲ್ಲಿ ಆರು ಶಾಲೆಗಳ ಒಟ್ಟು 210 ವಿದ್ಯಾರ್ಥಿಗಳು ಹಾಗೂ 10 ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 18 ಬ್ಲಾಕ್ಗಳನ್ನು ಸಿದ್ಧಪಡಿಸಲಾಗಿದ್ದು ಈಗಾಗಲೇ ಸ್ಯಾನಿಟೈಸರ್ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಪರೀಕ್ಷಾ ಸಿಬ್ಬಂದಿ ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯವಾಗಿದ್ದು, ಲಸಿಕೆ ಪಡೆದಿರುವ ಸಿಬ್ಬಂದಿಯನ್ನು ಮಾತ್ರ ಪರೀಕ್ಷಾ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 209 ಒಟ್ಟು ವಿದ್ಯಾರ್ಥಿಗಳು, 18 ಬ್ಲಾಕ್ಗಳು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆದಿರುವ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 110 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು 12 ಬ್ಲಾಕ್ಗಳನ್ನು ತೆರೆಯಲಾಗಿದೆ ಎಂದು ಪ್ರಶ್ನೆಪಲಕಾರದ ಶಂಕ್ರಪ್ಪ ತಳವಾರ ತಿಳಿಸಿದರು.
ಪ್ರಮುಖರಾದ ರಹೇಮತ್ಅಲಿ, ಗಂಗಾಧರ ಮಡಿವಾಳರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.