ಕೊಪ್ಪಳ: ಸಾಮಾಜಿಕ ಅರಣ್ಯ ವಿಭಾಗದಲ್ಲಿ ನೆಡುತೋಪು ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇಲಾಖೆ ಅನುದಾನಲ್ಲಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಸರ್.ಜಗದೀಶಚಂದ್ರ ಬೋಸ್ ಅರಣ್ಯ ಇಲಾಖೆ ದಿನಗೂಲಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಾಮಾಜಿಕ ಅರಣ್ಯ ವಿಭಾಗದಲ್ಲಿ ನೆಡುತೋಪು ಕಾವಲುಗಾರರಿಗೆ ಇಲಾಖೆಯ ಅನುದಾನದಲ್ಲಿಯೇ ವೇತನ ಪಾವತಿಸಬೇಕು. ಜತೆಗೆ ಕಾರ್ಮಿಕರ ಕಾಯ್ದೆಯಂತೆ ವಾರದ ರಜೆ ಹಾಗೂ ಸರ್ಕಾರಿ ರಜೆ ದಿನಗಳನ್ನು ಕಾರ್ಮಿಕರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಾಮಾಜಿಕ ಅರಣ್ಯ ವಿಭಾಗದಲ್ಲಿ ಮೇ 1ರಿಂದ ಈವರೆಗೂ ನರೇಗಾ ಯೋಜನೆಯ ಅಡಿ ಕೈಗೊಂಡು ನಿರ್ವಹಿಸಿದ, ಕಾಮಗಾರಿ ಹಾಗೂ ಸಾಮಾಜಿಕ ಅರಣ್ಯ ಯೋಜನೆಯ ಅಡಿಯಲ್ಲಿ ನಿರ್ವಹಿಸಿದ ಕಾಮಗಾರಿಗಳಲ್ಲಿ ಭ್ರಷ್ಟಚಾರವಾಗಿದೆ. ಹೀಗಾಗಿ ಜಿಲ್ಲಾ ಮಟ್ಟದ ತನಿಖಾ ತಂಡ ರಚಿಸಿ, ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಿನಗೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ನೆಡತೋಪು ಕಾವಲುಗಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ ವೇತನ ನೀಡಬೇಕು. ಕಾರ್ಮಿಕರ ಕಾಯ್ದೆಯಂತೆ ರಜಾ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್ಐ ನೀಡಬೇಕು. ಪ್ರತಿ ಕಾರ್ಮಿಕರಿಗೂ ಸಮವಸ್ತ್ರ, ಗುರುತಿನ ಚೀಟಿ, ಭದ್ರತಾ ಸಲಕರಣೆ ವಿತರಿಸಬೇಕು. ಈವರೆಗೂ ರಜಾ ದಿನಗಳಂದು ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ತಳಕಲ್, ಉಪಾಧ್ಯಕ್ಷ ಶರಣಪ್ಪ, ತಮ್ಮಣ್ಣ, ಬಿಜಕಲ್ ಬಸವರಾಜ, ಮುದುಕಪ್ಪ, ಶರಣಪ್ಪ ಹನುಮಸಾಗರ, ಮಲ್ಲಯ್ಯ, ಪರಸಪ್ಪ, ಕಾರ್ಯದರ್ಶಿ ದುರಗಪ್ಪ, ಬಾಲಪ್ಪ, ವೀರನಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.