ADVERTISEMENT

‘ಸಿಂಡಿಕೇಟ್‌ ಬ್ಯಾಂಕ್‌ 112 ಕೋಟಿ ವ್ಯವಹಾರ’

ಸಿಂಡಿಕೇಟ್‌ ಬ್ಯಾಂಕ್‌ನ 44ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:39 IST
Last Updated 5 ಜುಲೈ 2018, 17:39 IST
ಕುಷ್ಟಗಿ ಸಿಂಡಿಕೇಟ್ ಬ್ಯಾಂಕ್‌ ಶಾಖೆಯಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವದಲ್ಲಿ ದೊಡ್ಡಪ್ಪ ಜ್ಯೋತಿ ಮಾತನಾಡಿದರು
ಕುಷ್ಟಗಿ ಸಿಂಡಿಕೇಟ್ ಬ್ಯಾಂಕ್‌ ಶಾಖೆಯಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವದಲ್ಲಿ ದೊಡ್ಡಪ್ಪ ಜ್ಯೋತಿ ಮಾತನಾಡಿದರು   

ಕುಷ್ಟಗಿ: ‘ಪಟ್ಟಣದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಆರಂಭಗೊಂಡ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಸುಮಾರು ₹112 ಕೋಟಿ ವ್ಯವಹಾರ ನಡೆಸಿದೆ’ ಎಂದು ಶಾಖೆ ವ್ಯವಸ್ಥಾಪಕ ಲಕ್ಷ್ಮಿಕಾಂತ ರೆಡ್ಡಿ ಹೇಳಿದರು.

ಶಾಖೆಯ 44ನೇ ವಾರ್ಷಿಕೋತ್ಸವದ ನಿಮಿತ್ತ ಗುರುವಾರ ಇಲ್ಲಿ ಏರ್ಪಡಿಸಲಾಗಿದ್ದ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗ್ರಾಹಕರ ಸಹಕಾರ, ಸಿಬ್ಬಂದಿಯ ಸಮರ್ಪಣಾ ಮನೋಭಾವದ ಸೇವೆಯಿಂದ ಬ್ಯಾಂಕ್‌ ಶಾಖೆ ಉತ್ತಮ ಸಾಧನೆ ಗೈಯಲು ಸಾಧ್ಯವಾಗಿದೆ. ಕೃಷಿ ತೋಟಗಾರಿಕೆ ಮತ್ತಿತರೆ ಕ್ಷೇತ್ರಗಳಲ್ಲಿ ಈ ಭಾಗದಲ್ಲಿ ವಿಪುಲ ಅವಕಾಶಗಳಿದ್ದು ರೈತರು ಅವುಗಳನ್ನು ಬಳಸಿಕೊಳ್ಳಬೇಕು’ ಎಂದರು.

‘ಬ್ಯಾಂಕಿನಿಂದ ರೈತರು ಇತರೆ ಗ್ರಾಹಕರಿಗೆ ಇರುವ ಸಾಲ ಮತ್ತಿತರೆ ಸೌಲಭ್ಯಗಳನ್ನು ಕುರಿತು ವಿವರಿಸಿದ ಅವರು, ಪಡೆದ ಸಾಲವನ್ನ ಗ್ರಾಹಕರು ಸಕಾಲದಲ್ಲಿ ಪಾವತಿಸಿದರೆ ಸಾಲ ಪಡೆಯದೇ ಇರುವ ಇತರೆ ಜನರಿಗೂ ಸೌಲಭ್ಯ ವಿಸ್ತರಿಸಲು ಸಾಧ್ಯವಾಗುತ್ತದೆ’ ಎಂದು ಮನವಿ ಮಾಡಿದರು.

ADVERTISEMENT

ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ದೊಡ್ಡಪ್ಪ ಜ್ಯೋತಿ ಮಾತನಾಡಿ ‘ಹಣಕಾಸಿನ ಎಲ್ಲ ವ್ಯವಹಾರಗಳನ್ನು ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನಡೆಸಬೇಕು. ಬ್ಯಾಂಕ್‌ಗಳಿಂದ ಪಡೆಯುವ ಸಾಲವನ್ನು ಅನ್ಯ ಖರ್ಚುವೆಚ್ಚಗಳಿಗೆ ಬಳಸದೆ ನಿಗದಿತ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಆದಾಯದ ಮಿತಿಯ ಒಳಗೆ ಬದುಕುವುದನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಯಾರ ಬಳಿಯೂ ಹಣಕ್ಕಾಗಿ ಕೈಚಾಚುವ ಅಗತ್ಯ ಇರುವುದಿಲ್ಲ’ ಎಂದು ಹೇಳಿದರು.

ಇದೇ ವೇಳೆ ಉಳಿತಾಯದ ಮಹತ್ವ, ಸಾಮಾಜಿಕ ಭದ್ರತಾ ಯೋಜನೆಗಳಾದ ಅಟಲ್‌ ಪಿಂಚಣಿ, ಜೀವನ ಜ್ಯೋತಿ, ಸಾಮಾಜಿಕ ಸುರಕ್ಷಾ ವಿಮಾ ಯೋಜನೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದರು

ಉತ್ತಮ ಗ್ರಾಹಕರೆಂದು ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ಜೆ.ಶರಣಪ್ಪ ಬ್ಯಾಂಕ್‌ ಸೇವೆಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು. ಬಸವರಾಜ ತಟ್ಟಿ, ದೊಡ್ಡಪ್ಪ ಜ್ಯೋತಿ ಅವರನ್ನು ಕಾರ್ಯಕ್ರಮದಲ್ಲಿ ಬ್ಯಾಂಕ್‌ ವತಿಯಿಂದ ಸತ್ಕರಿಸಲಾಯಿತು. ಬ್ಯಾಂಕ್‌ನ ಅಧಿಕಾರಿಗಳು, ಸಿಬ್ಬಂದಿ ಮತ್ತು ಅನೇಕ ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.