ಗಂಗಾವತಿ: ತಾಲ್ಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ತಹಶೀಲ್ದಾರ್ ಯು.ನಾಗರಾಜ ಭಾನುವಾರ ಭೇಟಿ ನೀಡಿ, ನೀರು ವೀಕ್ಷಿಸಿ, ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿ, ‘ತುಂಗಾಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರುಬಿಟ್ಟ ಕಾರಣ ನದಿಯು ತುಂಬಿ ಹರಿಯುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಟ್ಟಿರುವ ಕಾರಣ ಕಂಪ್ಲಿ, ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಮುಂಜಾಗ್ರತೆಯಾಗಿ ಸೇತುವೆಗೆ ಬ್ಯಾರಿಕೇಡ್ ಅಳವಡಿಸಿ, ಜನ ಮತ್ತು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಈವರೆಗೆ ತಾಲ್ಲೂಕಿನ ಯಾವ ಗ್ರಾಮಗಳಿಗೂ ನದಿಯ ನೀರು ನುಗ್ಗಿಲ್ಲ.
ಎರಡು ಲಕ್ಷ ಕ್ಯುಸೆಕ್ಗೂ ಅಧಿಕ ನೀರು ನದಿಗೆ ಬಿಟ್ಟರೆ ಮಾತ್ರ ತಾಲ್ಲೂಕಿನ ಹಳೆ ಅಯೋಧ್ಯೆ, ಢಣಾಪೂರ, ಹೆಬ್ಬಾಳ ಸೇರಿದಂತೆ ಕೆಲ ಗ್ರಾಮಗಳಿಗೆ ನೀರು ನುಗ್ಗಲಿದೆ. ಮುಂಜಾಗ್ರತೆಯಿಂದ ನದಿಪಾತ್ರಗಳಲ್ಲಿ ಗ್ರಾಮಸ್ಥರು ತೆರಳದಂತೆ ಪೊಲೀಸ್ ಮತ್ತು ಕಂದಾಯ, ಗ್ರಾಮ ಲೆಕ್ಕಾಧಿಕಾರಿ ಸಿಬ್ಬಂದಿಯನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ’ ಎಂದರು.
ನಂತರ ಕಂಪ್ಲಿ ಗಂಗಾವತಿ ಸಂಪರ್ಕ ಕಲ್ಪಿಸುವ ಸೇತುವೆ, ಹೊಸಳ್ಳಿ, ಹೆಬ್ಬಾಳ, ಆನೆಗೊಂದಿ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.