ಕುಷ್ಟಗಿ: ಕರ್ತವ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಮತ್ತು ಉಪನ್ಯಾಸಕಿ ಮಧ್ಯೆ ವಾಗ್ವಾದ ನಡೆದಿದ್ದು ಉಪನ್ಯಾಸಕಿ ಕುಟುಂಬ ಸಹಿತ ಕಾಲೇಜನ ಬಳಿ ಸಂಜೆವರೆಗೂ ಧರಣಿ ಕುಳಿತ ಘಟನೆ ಮಂಗಳವಾರ ನಡೆದಿದೆ.
ಕಾಲೇಜಿನಲ್ಲಿಯ ಕರ್ತವ್ಯ ಸಮರ್ಪಕ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲವೆಂಬ ಕಾರಣಕ್ಕೆ ಪ್ರಾಚಾರ್ಯೆ ಉಪನ್ಯಾಸಕಿ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ಗೋಪ್ಯತಾ ವರದಿ ಸಲ್ಲಿಸಿದ್ದರು. ಈ ವಿಷಯ ತಿಳಿದು ಉಪನ್ಯಾಸಕಿ ಆಕ್ಷೇಪ ವ್ಯಕ್ತಪಡಿಸಿದಾಗ ಕೆಲಸದ ಅವಧಿಯಲ್ಲಿ ಇಬ್ಬರ ಮಧ್ಯೆ ತೀವ್ರ ಮಾತಿನ ಚಕಮಕಿ, ಅವಾಚ್ಯ ಪದಗಳ ವಿನಿಮಯ ನಡೆಯಿತು. ಅಲ್ಲದೆ ಮೇಲಧಿಕಾರಿಗಳಿಗೆ ಸಲ್ಲಿಸಿದ ವರದಿಯನ್ನು ನೀಡುವಂತೆ ಉಪನ್ಯಾಸಕಿ ಒತ್ತಾಯಿಸಿದರೂ ಗೋಪ್ಯತಾ ವರದಿಯನ್ನು ನೀಡಲು ಬರುವುದಿಲ್ಲ ಎಂದು ಪ್ರಾಚಾರ್ಯೆ ಹೇಳಿದ್ದಕ್ಕೆ ಕುಪಿತಗೊಂಡ ಉಪನ್ಯಾಸಕಿ ವರದಿ ಕೊಡುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ಪತಿ ಮತ್ತು ಮಕ್ಕಳೊಂದಿಗೆ ಕಾಲೇಜಿನ ಮುಂದೆ ಧರಣಿ ಕುಳಿತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಉಪನ್ಯಾಸಕಿ ಧರಣಿ ಕೈಬಿಡುವಲ್ಲಿ ಮನ ಒಲಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಆರ್.ನಿಂಗಪ್ಪ, ‘ಇಬ್ಬರ ಮಧ್ಯೆ ಜಗಳ ನಡೆದಿರುವುದು ಗೊತ್ತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಇಬ್ಬರನ್ನೂ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.