ADVERTISEMENT

ಕೊಪ್ಪಳ: ಕ್ಷಯರೋಗ ಜಾಗೃತಿ ಮೂಡಿಸುವುದು ಅಗತ್ಯ

ಕ್ಷಯರೋಗ ಪಾಲುದಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 6:43 IST
Last Updated 28 ಜುಲೈ 2021, 6:43 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು   

ಕೊಪ್ಪಳ: ‘ಕ್ಷಯರೋಗದಿಂದ ಉಂಟಾಗುವ ಮರಣ ಪ್ರಮಾಣ ಕಡಿಮೆಗೊಳಿಸಲು ತ್ವರಿತ ಪತ್ತೆ, ಸಂಪೂರ್ಣ ಚಿಕಿತ್ಸೆ ಮುಖ್ಯ. ಅಸ್ವಸ್ಥ ರೋಗಿಗಳಲ್ಲಿ ಕ್ಷಯರೋಗ ಗುಣಲಕ್ಷಣಗಳು ಕಂಡುಬಂದಲ್ಲಿ ಶೀಘ್ರ ತಪಾಸಣೆ ಮಾಡಲು ಜಾಗೃತಿ ಆಂದೋಲನ ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಕ್ಷಯರೋಗ ಪಾಲುದಾರರ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಕ್ಷಯರೋಗ ತಪಾಸಣೆ ಮತ್ತು ಪತ್ತೆ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ ಕಾರಟಗಿ, ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳ ತಾಲ್ಲೂಕುಗಳಲ್ಲಿಕಡಿಮೆ ಇರುವುದು ಕಂಡುಬಂದಿದೆ. ಆದ್ದರಿಂದಎಲ್ಲ ತಾಲ್ಲೂಕುಗಳಲ್ಲೂ ಸಕ್ರಿಯವಾಗಿ ಆಂದೋಲನ ನಡೆಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

ಆ.2 ರಿಂದ 12ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಯಲಿದೆ. ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲಿದ ರೋಗಿಗಳು ಹಾಗೂ ಮನೆಯ ಸಂಪರ್ಕಿತರಲ್ಲಿ ಕ್ಷಯರೋಗದ ಲಕ್ಷಣ ಕಂಡುಬಂದಲ್ಲಿ ಅಂಥವರನ್ನು ಕ್ಷಯರೋಗ ಪರೀಕ್ಷೆಗೆ ಒಳಪಡಿಸಬೇಕು. ಕ್ಷಯರೋಗಿಗಳ ಸಂಪರ್ಕಿತರ ಮೇಲೆ ಹೆಚ್ಚಿನ ನಿಗಾವಹಿಸಿ ಪತ್ತೆ ಹಚ್ಚಿ, ಕ್ಷ-ಕಿರಣ ಪರೀಕ್ಷೆಗೆ ಒಳಪಡಿಸಬೇಕು. ಕ್ಷ-ಕಿರಣದ ಫಲಿತಾಂಶವನ್ನು ಕೃತಕ ಬುದ್ಧಿವಂತಿಕೆಯ ಆಧಾರದ ಮೇಲೆ ಅಸಹಜತೆ ಮತ್ತು ಸಂಶಯಾಸ್ಪದ ಕುರುಹುಗಳಿದ್ದಲ್ಲಿ ನಾಟ್ ಕಫ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು. ಕ್ಷಯಮುಕ್ತ ಕೆಲಸದ ಸ್ಥಳ ಅಭಿಯಾನವನ್ನು ಆದ್ಯತೆ ಮೇರೆಗೆ ಕಾರ್ಖಾನೆ, ರೈಸ್‌ಮಿಲ್ ಹಾಗೂ ಹೋಟೆಲ್‌ನಲ್ಲಿ ಮಾಡಬೇಕು. ಕಾರ್ಮಿಕರು,ಶಾಲಾ ಮಕ್ಕಳಿಗೆಕ್ಷಯರೋಗ ತಪಾಸಣೆ ಮತ್ತು ಪತ್ತೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ಸಮುದಾಯದ ಸಹಭಾಗಿತ್ವದಿಂದ ಮೇಲ್ವಿಚಾರಣೆ ಹೆಚ್ಚಿಸಲು ಕ್ಷಯರೋಗಿಗಳ ಕೇಂದ್ರೀಕೃತ ಆರೈಕೆ ನೀಡುವಂತೆ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಿಇಒಫೌಜಿಯಾ ತರನ್ನುಮ್,ಡಿಎಚ್‌ಒಡಾ. ಟಿ.ಲಿಂಗರಾಜು, ಆರ್.ಸಿ.ಎಚ್ ಅಧಿಕಾರಿ ಡಾ.ಜಂಬಯ್ಯ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ.ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.