ಕುಷ್ಟಗಿ (ಕೊಪ್ಪಳ ಜಿಲ್ಲೆ): ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಶಾಲೆಯ ಅಭಿವೃದ್ಧಿಗಾಗಿ ತಾಲ್ಲೂಕಿನ ಹಿರೇನಂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಆರ್.ಸುಧಾಮಣಿ ತಾವು ಕೆಲಸ ಮಾಡುವ ಶಾಲೆಗೆ ತಮ್ಮ ವೇತನದಲ್ಲಿ ₹1 ಲಕ್ಷ ದೇಣಿಗೆ ನೀಡಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಂಚಗಲ್ ಗ್ರಾಮದ ಸುಧಾಮಣಿ ಮೂರೂವರೆ ವರ್ಷಗಳಿಂದ ಹಿರೇನಂದಿಹಾಳ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಾಗಿದ್ದಾರೆ. ಬದುಕು ಕಟ್ಟಿಕೊಳ್ಳಲು ನೆರವಾದ ಮಕ್ಕಳು ಮತ್ತು ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ತುಡಿತ ಅವರದು. ಹಾಗಾಗಿ ಸಾಂದರ್ಭಿಕ ರಜೆ ಪಡೆದಾಗ ಇಲಾಖೆ ನಿಯಮಗಳ ಪ್ರಕಾರ ಸರ್ಕಾರ ತಮಗೆ ನೀಡಿದ ವೇತನದ ಮೊತ್ತವನ್ನೆಲ್ಲ ಶಾಲೆಗೆ ಮರಳಿಸಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
₹1 ಲಕ್ಷ ಚೆಕ್ ಸ್ವೀಕರಿಸಿ ಶಿಕ್ಷಕಿಯನ್ನು ಗೌರವಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ‘ಸರ್ಕಾರದೊಂದಿಗೆ ಶಿಕ್ಷಕರೂ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ’ ಎಂದರು.
ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ, ‘ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ವಿಷಯದಲ್ಲಿ ಶಿಕ್ಷಕಿ ಸುಧಾಮಣಿ ಅವರು ಹೊಂದಿರುವ ಮನೋಭಾವ ಉಳಿದ ಶಿಕ್ಷಕರಿಗೂ ಪ್ರೇರಣೆ ನೀಡುವಂತಿದೆ’ ಎಂದು ಹೇಳಿದರು.
ಶಾಲಾ ಮಕ್ಕಳಿಂದಲೇ ಅನ್ನ ದೊರೆತಿದೆ. ಹೀಗಾಗಿ ಶಾಲೆಗೆ ದೇಣಿಗೆ ನೀಡಿದ್ದೇನೆ. ಹಳ್ಳಿಗಳ ಶಾಲೆಗಳು ಅಭಿವೃದ್ಧಿಯಾಗಬೇಕು ಸಮುದಾಯ ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯಕೆ.ಆರ್.ಸುಧಾಮಣಿ ದೇಣಿಗೆ ನೀಡಿದ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.