ವರ್ಗಾವಣೆ
ಕೊಪ್ಪಳ: ತಾಲ್ಲೂಕಿನ ಬಹದ್ದೂರ್ ಬಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ ಅವರನ್ನು ಬೇರೊಂದು ಶಾಲೆಗೆ ವರ್ಗಾವಣೆ ಮಾಡಿದ್ದರಿಂದ ಆ ಶಾಲೆಯ ವಿದ್ಯಾರ್ಥಿಗಳು ಕಣ್ಣೀರು ಸುರಿಸಿ ಪ್ರತಿಭಟನೆ ನಡೆಸಿದರು.
ಬೀರಪ್ಪ ಇತ್ತೀಚೆಗೆ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈಗ ನಗರದ ಸಿಪಿಎಸ್ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಬಹದ್ದೂರ್ ಬಂಡಿ ಶಾಲೆ ಬಿಟ್ಟು ಬರುವಾಗ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದು, ಬೀರಪ್ಪ ಕೂಡ ಕಣ್ಣೀರು ಹಾಕುತ್ತಲೇ ಬಂದಿದ್ದರು.
ಗ್ರಾಮಸ್ಥರು, ಮಕ್ಕಳು ಪ್ರತಿಭಟನಾ ಸ್ಥಳಕ್ಕೆ ಬೀರಪ್ಪನನ್ನು ಕರೆಯಿಸಿ ಮರಳಿ ನಮ್ಮ ಶಾಲೆಗೆ ಹಾಜರಾಗುವಂತೆ ಒತ್ತಾಯಿಸಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೀರಪ್ಪ ‘ಬೆನ್ನು ನೋವಿದ್ದರಿಂದ ವಿಶ್ರಾಂತಿ ಪಡೆಯುವಂತೆ ಎರಡು ತಿಂಗಳ ಹಿಂದೆಯೇ ವೈದ್ಯರು ಸಲಹೆ ನೀಡಿದ್ದರು. ವಿಮಾನ ಪ್ರವಾಸ ಕರೆದುಕೊಂಡು ಹೋಗಬೇಕಿದ್ದ ಕಾರಣ ಬಹದ್ದೂರ್ ಬಂಡಿ ಶಾಲೆಯಲ್ಲಿ ಉಳಿದಿದ್ದೆ. ಈಗ ಸರ್ಕಾರದ ಆದೇಶದಂತೆ ಬೇರೆ ಶಾಲೆಗೆ ವರ್ಗಾವಣೆಯಾಗಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.