
ಕುಷ್ಟಗಿ: ಶಾಲೆ ತೊರೆದು ಕುರಿ ಕಾಯಲು ಹೋಗಿದ್ದ ಬಾಲಕನನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಯಶಸ್ವಿಯಾಗಿದ್ದಾರೆ.
ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಸಂದರ್ಶನಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿರುಪಾಪುರ ಗ್ರಾಮದ ಹೊರವಲಯದಲ್ಲಿ ಬಾಲಕನೊಬ್ಬ ಕುರಿ ಕಾಯುತ್ತಿರುವುದು ಗಮನಕ್ಕೆ ಬಂದಿದೆ. ವಾಹನ ನಿಲ್ಲಿಸಿ ಬಾಲಕನ ಬಳಿ ಹೋಗಿ ವಿಚಾರಿಸಿದಾಗ ಆ ಬಾಲಕ 3ನೇ ತರಗತಿ ನಂತರ ಶಾಲೆಗೆ ಹೋಗದೆ ಕುರಿ ಮೇಯಿಸಲು ತೆರಳಿರುವುದು ಕಂಡು ಬಂದಿದೆ.
ನಂತರ ಬಾಲಕನ ಮನವೊಲಿಸಿ ಮತ್ತು ಪಾಲಕರಿಗೆ ತಿಳಿವಳಿಕೆ ನೀಡಿ ವಿದ್ಯಾರ್ಥಿಯನ್ನು ತಮ್ಮ ವಾಹನದಲ್ಲಿಯೇ ಕರೆದೊಯ್ದು ವಿರುಪಾಪುರ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಗೆ ಸೇರಿಸಿದ್ದಾರೆ.
ಅಲ್ಲದೇ ಬಾಲಕನಿಗೆ ಶಾಲಾ ಸಮವಸ್ತ್ರ ನೀಡಿ ನಂತರ ಆತನ ಪಕ್ಕದಲ್ಲಿಯೇ ಕುಳಿತು ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದು ಪ್ರೋತ್ಸಾಹಿಸಿದ್ದು ಸಾರ್ವಜನಿಕರ ಮೆಚ್ಚುಗೆ ಕಾರಣವಾಯಿತು. ಗುರುವಾರವೂ ಬಾಲಕ ಶಾಲೆಗೆ ಹಾಜರಾಗಿದ್ದಾನೆ ಎಂದು ಶಿಕ್ಷಣಾಧಿಕಾರಿ 'ಪ್ರಜಾವಾಣಿ'ಗೆ ವಿವರಿಸಿದರು. ಕಳೆದ ವರ್ಷವೂ ಶಿಕ್ಷಣಾಧಿಕಾರಿ ಕಾಂಬಳೆ ಇದೇ ರೀತಿ ದನಗಾಹಿಗಳಾಗಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.