
ಕೊಪ್ಪಳ: ‘ಸಮಾಜದ ಅಭಿವೃದ್ಧಿ ಇಬ್ಬರು ಸ್ವಾಮೀಜಿಗಳಿಂದ ಸಾಧ್ಯವಾಗದು. ನಮ್ಮ ಸಮುದಾಯದ ಸ್ವಾಮೀಜಿಗಳ ಸಂಖ್ಯೆ ಹೆಚ್ಚಾದರೆ ಧಾರ್ಮಿಕ ಕೆಲಸಗಳು ಹೆಚ್ಚಾಗುತ್ತವೆ’ ಎಂದು ಹರಿಹರ್ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
‘ಮತಾಂತರಗೊಳ್ಳುತ್ತಿರುವುದು ವ್ಯಾಪಕ ಆಗುತ್ತಿರುವ ಹೊತ್ತಿನಲ್ಲಿ ಸಮಾಜದ ಪ್ರಗತಿ ಅಗತ್ಯ. ಇದಕ್ಕೆ ಪೂರಕವಾಗಿ ಪಂಚಮಸಾಲಿ ಲಿಂಗಾಯತ ಸ್ವಾಮೀಜಿಗಳ ಸಂಖ್ಯೆಯೂ ಹೆಚ್ಚಬೇಕಿದೆ’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
‘ನಾನು ಹಾಗೂ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇರೆ ಅಲ್ಲ. ನಮ್ಮಲ್ಲಿ ತಾರತಮ್ಯವಿಲ್ಲ‘ ಎಂದು ಸ್ಪಷ್ಟಪಡಿಸಿದ ಅವರು, ‘ನಾವೆಲ್ಲರೂ ಕಿತ್ತೂರುರಾಣಿ ಚನ್ನಮ್ಮನ ವಂಶಸ್ಥರು. ಇಬ್ಬರನ್ನು ಒಪ್ಪಿಕೊಂಡು ಸಮಾಜ ಖುಷಿಯಾಗಿದೆ. ನಮಗೆ ಯಾವಾಗ ಬೇಕೋ ಆವಾಗ ಸೇರುತ್ತೇವೆ. ನಾವು ಜಾಣರಿದ್ದೇವೆ’ ಎಂದು ಹೇಳಿದರು.
ಸಮುದಾಯಕ್ಕೆ ಮೀಸಲಾತಿ ಕುರಿತ ಪ್ರಶ್ನೆಗೆ ‘ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತೇವೆ. ಯಾವ ರಾಜಕಾರಣಿ ಈ ಕುರಿತು ಏನೇ ಹೇಳಿಕೆಯನ್ನು ನೀಡಿದರೂ ನಮಗೆ ಬೇಕಾಗಿದ್ದನ್ನು ಪಡೆದುಕೊಂಡೇ ತೀರುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.