ಮುನಿರಾಬಾದ್: ಸಮೀಪದ ಶಿವಪುರ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ದೇವಸ್ಥಾನದ ಹುಂಡಿ ಹೊಡೆಯುವ ಮೂಲಕ ಕಳ್ಳತನದ ವಿಫಲ ಯತ್ನ ನಡೆದಿದೆ.
ಗುರುವಾರ ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಿದ್ದು, ನಂತರ ಶಿವಪುರ ಗ್ರಾಮದ ಪ್ರಮುಖರು ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬೀಗ ಮುರಿದು ದೇವಸ್ಥಾನ ಒಳ ನುಗ್ಗಿದ ಕಳ್ಳರು ಹುಂಡಿಯನ್ನು ಕಬ್ಬಿಣ ಸರಳಿನಿಂದ ತೆರೆಯಲು ಯತ್ನಿಸಿದ್ದಾರೆ. ನಂತರ ಗರ್ಭಗುಡಿ ಹಾಗೂ ಪಕ್ಕದಲ್ಲಿರುವ ಅರ್ಚಕರ ಕೋಣೆಯ ಬೀಗ ಒಡೆದು ಹಣ ಮತ್ತು ಆಭರಣಕ್ಕಾಗಿ ತಡಕಾಡಿದ್ದಾರೆ. ಮುನಿರಾಬಾದ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಅಪರಾಧ ವಿಭಾಗ) ಮಲ್ಲಪ್ಪ ಅವರು ಸ್ಥಳಕ್ಕೆ ಬಂದು ಗ್ರಾಮದ ಮುಖಂಡರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ವಸ್ತು ಕಳ್ಳತನವಾದ ಬಗ್ಗೆ ಸಾಕ್ಷ್ಯ ದೊರೆತಿಲ್ಲ.
ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಕಾರಣ ಕಂದಾಯ ನಿರೀಕ್ಷಕ ಬಸವರಾಜ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.