ಕನಕಗಿರಿ: ಯಾರೋ ಮೃತಪಟ್ಟರೆ ಹಿಡಿ ಮಣ್ಣು ಹಾಕಿಯೋ, ಉರಿಯುತ್ತಿರುವ ಚಿತೆಗೆ ಕೈ ಮುಗಿದು ಬರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮೃತನ ಹೆಸರಿನಲ್ಲಿ ಎರಡು ಸಸಿ ನೆಟ್ಟು ಪರಿಸರ ಕಾಳಜಿ ಜತೆ ಸತ್ತವರ ಹೆಸರು ಸ್ಥಾಯಿಯಾಗಿರುವಂತೆ ಮಾಡುತ್ತಿದ್ದಾರೆ.
ಪಟ್ಟಣದ ನಿವಾಸಿಯಾದ ಬಸವರಾಜ ಗುಂಡಾಣಿ ಹೊಸಪೇಟೆಯ ಜೆಸ್ಕಾಂ ಕಚೇರಿಯಲ್ಲಿ ಮಾರ್ಗದಾಳು(ಲೈನ್ಮನ್). ಕುಟುಂಬದ ಸದಸ್ಯರು, ಗೆಳೆಯರು, ಅವರ ಸಂಬಂಧಿಕರು ಮೃತಪಟ್ಟರೆ ಹೂವಿನ ಹಾರ, ಟೆಂಗಿನಕಾಯಿ, ಉದ್ದಿನ ಕಡ್ಡಿ ಜತೆಗೆ ಎರಡು ಬಗೆಯ ಸಸಿಗಳನ್ನು ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಂಡಿದ್ದಾರೆ.
ಅಂತ್ಯಕ್ರಿಯೆಯ ವಿಧಾನಗಳು ಮುಗಿಸಿ ಮನೆಗೆ ಬರುವಾಗ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ ಕುರಿತು ಹಿತ ನುಡಿಗಳನ್ನು ಹಾಡುತ್ತಾರೆ. ಬಳ್ಳಾರಿ, ಕನಕಗಿರಿ, ವಿಜಯನಗರ ಜಿಲ್ಲೆಯ ಕೊಂಡನಾಯಕನಹಳ್ಳಿಯ ಸ್ಮಶಾನದಲ್ಲಿ ವಿವಿಧ ತಳಿಯ 60 ಸಸಿಗಳನ್ನು ನೆಟ್ಟಿದ್ದಾರೆ. ಅಂತ್ಯಕ್ರಿಯೆ ಮಾತ್ರವಲ್ಲದೆ ಜನ್ಮದಿನ, ಮದುವೆ ವೇಳೆ ನೂತನ ವರ- ವಧುವಿನ ಕೈಯಲ್ಲಿ ಸಸಿ ನೀಡಿ ಜಾಗೃತಿ ಮೂಡಿಸಿದ್ದಾರೆ.
ಅಂಬೇಡ್ಕರ್ ಜಯಂತಿ ದಿನ ವಸತಿ ನಿಲಯ ಅವರಣದಲ್ಲಿ ಹತ್ತಾರು ಸಸಿ, ಮನೆಯ ಆವರಣದಲ್ಲಿ 265 ಸಸಿ ನೆಟ್ಟು ವಿತರಣೆ ಮಾಡಿದ್ದಾರೆ.
ಪುತ್ರ ಅಭಿಷೇಕರಾಜ ಅವರ ಜನ್ಮ ದಿನಾಚರಣೆಯನ್ನು ಸಮೀಪದ ವಿಠಲಾಪುರ ರಸ್ತೆಯಲ್ಲಿರುವ ತಮ್ಮ ಹೊಲದಲ್ಲಿ ಕುಟುಂಬದ ಸದಸ್ಯರ ಜತೆಗೆ ಬೇವು, ಹುಣಸೆ ತಳಿಯ 60 ಸಸಿಗಳನ್ನು ನೆಟ್ಟು ಪೋಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಬಸವರಾಜ ಅವರು ತಮ್ಮ ಭಾನುವಾರದ ರಜೆಯನ್ನು ಇಂಥ ಕೆಲಸಗಳಿಗೆ ಮೀಸಲಿಟ್ಟಿದ್ದಾರೆ. ಗುಂಡಾಣಿ ಅವರ ಪರಿಸರ ಜಾಗೃತಿ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದು ಗೆಳೆಯ ಕನಕರೆಡ್ಡಿ ಕೆರಿ ತಿಳಿಸುತ್ತಾರೆ.
ವಿದ್ಯುತ್ ಲೈನ್ಗೆ ಅಡೆತಡೆ ಮಾಡುವ ಗಿಡಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವಾಗ ಬೇಸರವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಗಿಡಗಳನ್ನು ಬೆಳಸುವ ಕಾಯಕ ಆರಂಭಿಸಿದೆಬಸವರಾಜ ಗುಂಡಾಣಿ ಪರಿಸರ ಪ್ರೇಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.