ADVERTISEMENT

ತುಂಗಭದ್ರೆ: ಹಸಿರು ಬಣ್ಣಕ್ಕೆ ತಿರುಗುತ್ತಿರುವ ಹಿನ್ನೀರು

ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಸಮಸ್ಯೆ: ಜಲಕಳೆಯಿಂದ ತ್ಯಾಜ್ಯ

ಸಿದ್ದನಗೌಡ ಪಾಟೀಲ
Published 13 ಫೆಬ್ರುವರಿ 2022, 4:29 IST
Last Updated 13 ಫೆಬ್ರುವರಿ 2022, 4:29 IST
ಕೊಪ್ಪಳ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನ ನದಿ ಪಾತ್ರಗಳಲ್ಲಿ ಅಲ್ಲಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು
ಕೊಪ್ಪಳ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನ ನದಿ ಪಾತ್ರಗಳಲ್ಲಿ ಅಲ್ಲಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು   

ಕೊಪ್ಪಳ: ಗಂಗಾ ಸ್ನಾನ, ತುಂಗಾ ಪಾನ. ಪುರಾತನ ಕಾಲದಿಂದಲೂ ಬಂದಿರುವ ಈ ಮಾತಿಗೆ ತುಂಗಭದ್ರೆಯ ನೀರಿಗೆ ಇರುವ ರೋಗನಿರೋಧಕ ಶಕ್ತಿಯ ಮಹತ್ವವೇ ಕಾರಣ. ಈಗ ಜಲಾಶಯದ ಹಿನ್ನೀರಿನಲ್ಲಿ ಹಸಿರು ಪಾಚಿಗಟ್ಟಿ ಆತಂಕ ಮೂಡಿಸಿದೆ.

ಕುಡಿಯಲು ಅತ್ಯಂತ ಯೋಗ್ಯವಾದ ಮತ್ತು ಖನಿಜಯುಕ್ತ ಅಂಶಗಳ ತುಂಗಭದ್ರೆ ನೀರು ತನ್ನ ನದಿಪಾತ್ರಗಳನ್ನೆಲ್ಲ ಸಮೃದ್ಧಗೊಳಿಸಿದೆ. ಮಲೆನಾಡಿನಲ್ಲಿ ಮಳೆಯಾದರೆ ಅಲ್ಲಿನ ಎಲ್ಲ ಸತ್ವಗಳನ್ನು ಹೀರಿಕೊಂಡು ಬಂಡೆಗಳ ಮಧ್ಯೆ ಹರಿದು ಕೃಷ್ಣೆ ಸೇರುವ ಈ ನದಿಗೆ ಅತ್ಯಂತ ವಿಶೇಷತೆ ಇದೆ.

ತುಂಗಾ ಮತ್ತು ಎರಡು ಕವಲುಗಳಾಗಿ ಹರಿದು ಕೂಡಲಿಯಲ್ಲಿ ಸಮಾಗಮಗೊಂಡ ಬಯಲು ಮತ್ತು ಬರದ ನಾಡಿನತ್ತ ಬರುವ ಈ ನದಿ ಅತ್ಯಂತ ವಿಸ್ಮಯ ಮತ್ತು ನಿಗೂಢಗಳಲ್ಲಿ ಒಂದು ತನ್ನ ಒಳಸುಳಿ, ಬಂಡೆಗಳ ಆಳದಲ್ಲಿ ಗುಪ್ತಗಾಮಿಯಾಗಿ ಹರಿದು ಇಂದಿಗೂ ಅಧ್ಯಯನಕ್ಕೆ ಯೋಗ್ಯವಾದದು.

ADVERTISEMENT

ಮಳೆಗಾಲದಲ್ಲಿ ಅಬ್ಬರದಿಂದ ಹರಿಯುವ ನದಿಗೆ ತಾಲ್ಲೂಕಿನ ಮುನಿರಾಬಾದ್ ಬಳಿ ತಡೆ ನೀಡಿ ಆರು ದಶಕಗಳ ಹಿಂದೆ ಜಲಾಶಯ ನಿರ್ಮಾಣ ಮಾಡಲಾಗಿದೆ. ಇದರಿಂದ 5 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸಲಾಗುತ್ತದೆ. ಜಲಾಶಯದಲ್ಲಿ 200 ಟಿಎಂಸಿ ನೀರು ಸಂಗ್ರಹಣದ ಸಾಮರ್ಥ್ಯವಿದ್ದು, 30 ಅಡಿ ಹೂಳು ತುಂಬಿದೆ ಎನ್ನಲಾಗಿದೆ.ಈ ಸಾರಿ ಹೆಚ್ಚಿನ ಮಳೆಯಾಗಿದ್ದರೂ ಎರಡು ಬೆಳೆಗೆ ನೀರು ಹರಿಸಿ, ಜಲಾಶಯದಲ್ಲಿ ಇನ್ನೂ ನೀರಿನ ಸಂಗ್ರಹ ಇದೆ.

ನೀರು ನಿತ್ಯ ಕಾಲುವೆಗಳ ಮೂಲಕ ಹರಿದು ಹೋಗುತ್ತಿರುವ ಜಲಾಶಯದ ಮುಂಭಾಗ ಮತ್ತು ಕೊಪ್ಪಳ ಜಿಲ್ಲೆಯ ಹಿನ್ನೀರಿನಲ್ಲಿ ಹೆಚ್ಚಿನ ರೀತಿ ಹಸಿರು ಪಾಚಿಗಟ್ಟಿದೆ. ಕೆಲವು ಕಡೆ ದುರ್ನಾತ ಬರುತ್ತಿದೆ.

ಕಾರಣವೇನು: ‘ಬಹುದಿನಗಳಿಂದ ದೂರದವರೆಗೆ ನೀರು ನಿಲ್ಲುವುದರಿಂದ ಬಿಸಿಲು ಮತ್ತು ನದಿಯಲ್ಲಿ ಹರಿದು ಬರುವ ಕಲ್ಮಶಗಳಿಂದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಪ್ರಮುಖವಾಗಿ ಈ ಭಾಗದಲ್ಲಿ ಇರುವ ಬೃಹತ್‌ ಕಾರ್ಖಾನೆಗಳು ವ್ಯಾಪಕ ಪ್ರಮಾಣದ ತ್ಯಾಜ್ಯವನ್ನು ನದಿ ನೀರಿಗೆ ಹರಿದು ಬಿಡುತ್ತಿರುವ ಪರಿಣಾಮ ಕಲ್ಮಶವೆಲ್ಲ ಒಂದೆಡೆ ಸಂಗ್ರಹವಾಗುತ್ತಿದೆ’ ಎನ್ನುತ್ತಾರೆ ನೀರಾವರಿ ತಜ್ಞರು.

ಈ ರೀತಿಯ ತ್ಯಾಜ್ಯಗಳಲ್ಲಿ ಸೀಸದ ಅಂಶ ಹೆಚ್ಚಿ ಶುದ್ಧೀಕರಿಸಿದ ನೀರು ಕುಡಿಯದೇ ಹೋದರೆ ಕ್ಯಾನ್ಸರ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಹೆಚ್ಚಿನ ಆನೆಕಾಲು ರೋಗ ಪ್ರಮಾಣಗಳು ನದಿ ಪಾತ್ರದ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.