ಮುನಿರಾಬಾದ್: ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ, ಪೂರ್ಣಪ್ರಮಾಣದ ನೀರು ಸಂಗ್ರಹಿಸಲು ಸಾಮರ್ಥ್ಯ ಇಲ್ಲದಂತಾಗಿದೆ. ಅಣೆಕಟ್ಟೆಯ ಕ್ರಸ್ಟ್ಗೇಟ್ಗಳ ಸಮಸ್ಯೆ ಆಗಿರುವುದರಿಂದ ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೀಗಾಗಿ ರೈತರಿಗೆ ಎರಡನೇ ಬೆಳೆಗೆ ನೀರು ಸಿಗುವುದು ಅನುಮಾನವಾಗಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.
ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಇರುವುದು 105 ಟಿಎಂಸಿ ಅಡಿಯಷ್ಟು. ಆದರೆ ಕ್ರಸ್ಟ್ ಗೇಟ್ಗಳ ಸಮಸ್ಯೆಯಿಂದಾಗಿ ಈಗ ಸಾಮರ್ಥ್ಯ ಇರುವುದು 80 ಟಿಎಂಸಿ ಅಡಿಯಷ್ಟು ಮಾತ್ರ.
ಮಾನ್ಸೂನ್ ಆರಂಭವಾಗಿ ಜೂನ್ನಲ್ಲಿಯೇ ತುಂಗಭದ್ರಾ ಜಲಾಶಯ ತುಂಬಿದ್ದರೂ, ನದಿಯಲ್ಲಿಯೇ ಹೆಚ್ಚು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದಕ್ಕೆ ತುಂಗಭದ್ರಾ ಅಣೆಕಟ್ಟೆ ಆಡಳಿತ ಮಂಡಳಿ ಅಧಿಕಾರಿಗಳ ಹೊಣೆಗೇಡಿತನವೇ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ.
ದುರಸ್ತಿಯಾಗದ ಗೇಟ್:
ಕಳೆದ ವರ್ಷ ಆಗಸ್ಟ್ನಲ್ಲಿ ಜಲಾಶಯದ ಗೇಟ್ ನಂ.19 ಕೊಚ್ಚಿ ಹೋಗಿ ಜಲಾಶಯದ ಸುರಕ್ಷತೆಗೆ ಸವಾಲು ಒಡ್ಡಿತ್ತು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಮುನಿರಾಬಾದ್ನಲ್ಲಿ ಸಭೆ ನಡೆಸಿದ ರಾಜ್ಯ ಸರ್ಕಾರ 6 ತಿಂಗಳಲ್ಲಿ ಎಲ್ಲ ಗೇಟುಗಳನ್ನು ಬದಲಿಸುವುದಾಗಿ ಘೋಷಿಸಿತ್ತು. ಆದರೆ ಈವರೆಗೂ ದುರಸ್ತಿಯಾಗಿಲ್ಲ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಕಾಲುವೆಗೆ ನೀರು ಬೇಕು:
ಸಾಕಷ್ಟು ಮಳೆಯಾಗಿ ಜಲಾಶಯ ತುಂಬಿದೆ. ಆದರೆ 2ನೇ ಬೆಳೆಗೆ ನೀರು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಜಲಾಶಯ ಮುಂಭಾಗದ ಮುನಿರಾಬಾದ್, ಹುಲಿಗಿ, ಶಿವಪುರ, ಬಂಡಿ ಹರ್ಲಾಪುರ, ಸಾಣಾಪುರ ಮತ್ತು ಆನೆಗೊಂದಿವರೆಗೆ ಇರುವ ವಿಜಯನಗರ ಕಾಲುವೆಗಳಿಗೆ ನೀರು ಹರಿಸಬೇಕು. 2 ವರ್ಷದ ಹಿಂದೆ ಜಲಾಶಯದಲ್ಲಿ 7 ಟಿಎಂಸಿ ಅಡಿ ನೀರು ಉಳಿದಿರುವಾಗ ಕೂಡ ಹೋರಾಟ ಮಾಡಿ, ವಿಜಯನಗರ ಕಾಲುವೆಗೆ ನೀರು ಪಡೆದಿದ್ದೇವೆ. ಈ ಬಾರಿ ನೀರು ಹರಿಸದಿದ್ದರೆ ಹೋರಾಟಕ್ಕೆ ಇಳಿ ಯುತ್ತೇವೆ’ ಎಂದು ಬಿಜೆಪಿ ಮುಖಂಡ ಪ್ರಭುರಾಜ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ಭಾಗಕ್ಕೆ ನೀರಿಲ್ಲ:
ಕುಡಿಯುವ ನೀರಿಗಾಗಿ ರಾಯಚೂರು ಜಿಲ್ಲೆ ಜಲಾಶಯ ಅವಲಂಬಿಸಿದೆ. ಈ ವರ್ಷ ಕುಡಿಯುವ ನೀರಿಗೆ ಪರಿತಪಿಸಬೇಕಾಗುತ್ತದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಜಲಾಶಯ ನೆಚ್ಚಿಕೊಂಡಿರುವ ಜಲ ವಿದ್ಯುತ್ ಉತ್ಪಾದನೆ ಮತ್ತು ನೀರು ಅವಲಂಬಿಸಿರುವ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಸುಮಾರು 10-15 ಕೈಗಾರಿಕೆಗಳು ನೀರಿಗಾಗಿ ಪರಿತಪಿಸುವಂತಾಗಿದೆ.
80 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ
ಮೊದಲು ಒಂದು ಗೇಟ್ ಮಾತ್ರ ಕೊಚ್ಚಿಹೋಗಿತ್ತು. ಈಗ ಮತ್ತೆ 7-8 ಕ್ರಸ್ಟ್ಗೇಟ್ಗಳು ನೀರಿನ ಒತ್ತಡಕ್ಕೆ ಬಾಗಿವೆ. ಜಲಾಶಯಕ್ಕೆ ಈಗ 105 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಇಲ್ಲ. ಹೀಗಾಗಿ 80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಿಸಬಹುದು ಎಂದು ತಜ್ಞರು ಹೇಳುತ್ತಾರೆ.
ತಜ್ಞರ ವರದಿ ಉಲ್ಲೇಖಿಸಿ, ‘ಅಚ್ಚುಕಟ್ಟು ಪ್ರದೇಶದ ಭತ್ತದ ಎರಡನೇ ಬೆಳೆಗೆ ನೀರು ಸಿಗುವುದಿಲ್ಲ’ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಎಲ್ಲ 33 ಕ್ರಸ್ಟ್ಗೇಟುಗಳನ್ನು ಬದಲಿಸುವಂತೆ ನೀರಾವರಿ ತಜ್ಞರು ನೀಡಿರುವ ಸೂಚನೆಯಿಂದ, ಭತ್ತ ಬೆಳೆಗಾರರ ಆತಂಕವನ್ನು ಇನ್ನೂ ಹೆಚ್ಚಿಸಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಮಗೆ ನೀರು ಸಿಗುತ್ತಿಲ್ಲ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕಾಗುತ್ತದೆ.- ಪ್ರಭುರಾಜ ಪಾಟೀಲ, ಬಿಜೆಪಿ ಜಿಲ್ಲಾ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.