ADVERTISEMENT

ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?

ಇಂದು ಕೇಂದ್ರ ಬಜೆಟ್‌, ಜಿಲ್ಲೆಯ ಜನರಲ್ಲಿ ಗರಿಗೆದರಿದ ನಿರೀಕ್ಷೆ

ಪ್ರಮೋದ ಕುಲಕರ್ಣಿ
Published 1 ಫೆಬ್ರುವರಿ 2026, 5:06 IST
Last Updated 1 ಫೆಬ್ರುವರಿ 2026, 5:06 IST
ರಾಜಶೇಖರ ಹಿಟ್ನಾಳ
ರಾಜಶೇಖರ ಹಿಟ್ನಾಳ   

ಕೊಪ್ಪಳ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದು, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದ ಯೋಜನೆಗಳಿಗೆ ವೇಗ ನೀಡುವ ಮತ್ತು ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಪ್ರಕಟಿಸಬಹುದು ಎನ್ನುವ ನಿರೀಕ್ಷೆ ಗರಿಗೆದರಿದೆ. 

ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಘೋಷಣೆಯಾಗಿದ್ದ ಗಿಣಗೇರಿ-ಮೆಹಬೂಬ್ ನಗರ ರೈಲ್ವೆ ಯೋಜನೆ ಅಪೂರ್ಣವಾಗಿದ್ದು, ಸದ್ಯಕ್ಕೆ ಸಿಂಧನೂರು ತನಕ ರೈಲು ಸಂಚಾರ ನಡೆಯುತ್ತಿದೆ. ಸಿಂಧನೂರಿನಿಂದ ರಾಯಚೂರು ತನಕ ಬಾಕಿ ಉಳಿದ ಕಾಮಗಾರಿ ಆಗಬೇಕಾಗಿದೆ. 

ಜಿಲ್ಲಾಕೇಂದ್ರ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪರಿಶೀಲಿಸಿ‌ ಒಂದೂವರೆ ವರ್ಷವಾಗಿದೆ. ಭೂಮಿ ಪರಿಶೀಲನೆ ನಡೆಸಿದ ಬಳಿಕ ಪೂರ್ವಸಾಧ್ಯತಾ ವರದಿಯನ್ನೂ ತಯಾರಿಸಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ ಎನ್ನುವುದು ಜನರ ಬೇಸರಕ್ಕೆ ಕಾರಣವಾಗಿದೆ.    

ADVERTISEMENT

ಹನುಮ ಜನಿಸಿದ ನಾಡು ಎನ್ನುವ ಹೆಗ್ಗಳಿಕೆಯ ಜಿಲ್ಲೆಯ ಅಂಜನಾದ್ರಿ ಬೆಟ್ಟ ಐತಿಹಾಸಿಕ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಖ್ಯಾತಿ ಪಡೆದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡ ಬಳಿಕ ಕೇಂದ್ರ ಸರ್ಕಾರವೂ ರಾಮನ ಭಂಟ ಹನುಮಂತನ ಕ್ಷೇತ್ರ ಅಂಜನಾದ್ರಿ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎನ್ನುವ ಬೇಡಿಕೆಯಿದೆ. ಅಯೋಧ್ಯೆಯ ಮಾದರಿಯಲ್ಲಿಯೇ ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕು ಎನ್ನುವುದು ಜನಾಗ್ರಹವಾಗಿದೆ.

ಜಿಲ್ಲೆಯು ಭತ್ತದ ಕಣಜವಾಗಿರುವುದರಿಂದ ಅಕ್ಕಿ ಆಧಾರಿತ ಕೈಗಾರಿಕೆಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಬೇಕಾಗಿದೆ.

ನಿರ್ಮಲಾ ಸೀತಾರಾಮನ್‌ ಅವರು 2025ರ ಅಕ್ಟೋಬರ್‌ನಲ್ಲಿ ತಾಲ್ಲೂಕಿನ ಮೆತಗಲ್‌ ಗ್ರಾಮದಲ್ಲಿ ಕೃಷಿ ಸಂಸ್ಕರಣಾ ಘಟಕಕ್ಕಾಗಿ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಒದಗಿಸಿದ್ದರು. ಬಜೆಟ್‌ ತಯಾರಿ ಪೂರ್ವದಲ್ಲಿ ನೆರೆಯ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸಭೆಗಳನ್ನು ನಡೆಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕಿನ್ನಾಳ ಕಲಾಕೃತಿ ಜಿಎಸ್‌ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಿ ತಯಾರಕರಿಗೆ ಪ್ರೋತ್ಸಾಹ ಒದಗಿಸಿದ್ದರು. ಹೀಗಾಗಿ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಒತ್ತು ನೀಡಬಹುದು ಎನ್ನುವ ನಿರೀಕ್ಷೆ ಜನರದ್ದಾಗಿದೆ.  

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಪ್ರಸಾದ್‌ ಎನ್ನುವ ಯೋಜನೆ 2014-15ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಭಾರತದಾದ್ಯಂತ ತೀರ್ಥಯಾತ್ರೆ, ಆಧ್ಯಾತ್ಮಿಕ ಸ್ಥಳಗಳ ಮೂಲಸೌಕರ್ಯ ಅಭಿವೃದ್ಧಿ, ಸೌಂದರ್ಯೀಕರಣ ಹಾಗೂ ಪ್ರವಾಸಿ ಅನುಭವವನ್ನು ಸುಧಾರಿಸುವ ಗುರಿ ಹೊಂದಿದೆ. ಈ ಯೋಜನೆಯಡಿ ರಾಜ್ಯದ ಚಾಮುಂಡಿ ಬೆಟ್ಟ, ಸವದತ್ತಿ ಯಲ್ಲಮ್ಮ ದೇವಸ್ಥಾನ ಮತ್ತು ಬೀದರ್‌ನ ಪಾಪನಾಶ ದೇವಾಲಯಗಳು ಅನುದಾನ ಪಡೆದಿವೆ. ಅದೇ ರೀತಿ ಲಕ್ಷಾಂತರ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೂ ಅನುದಾನದ ‘ಪ್ರಸಾದ’ ಸಿಗುವ ನಿರೀಕ್ಷೆಯಿದೆ.

ನಮ್ಮ ಭಾಗದ ರೈಲ್ವೆ ಯೋಜನೆಗಳಿಗೆ ಒತ್ತು ನೀಡಲು ಮನವಿ ಮಾಡಿದ್ದೇನೆ. ಪ್ರಸಾದ ಯೋಜನೆಯಲ್ಲಿ ಹುಲಿಗಿ ಸೇರಿದರೆ ಅಭಿವೃದ್ಧಿಗೆ ವೇಗ ಸಿಗುತ್ತದೆ.
ರಾಜಶೇಖರ ಹಿಟ್ನಾಳ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.