ಕೊಪ್ಪಳ: ‘ದುಬೈ ಪ್ರವಾಸದಲ್ಲಿ ಲೇಖಕ ಅನುಭವಿಸಿದ ಕಥನ ಕೃತಿಯಲ್ಲಿ ಮೂಡಿ ಬಂದಿದೆ. ಕವಿಯೊಬ್ಬ ಕಂಡ ಅನುಭವಗಳನ್ನು ಚಿತ್ರಿಸಿದ ರೀತಿ ಓದುಗರ ಗಮನ ಸೆಳೆಯುತ್ತದೆ. ಇದೊಂದು ಮಾರ್ಗದರ್ಶಿ ಕೃತಿಯೂ ಕೂಡ ಆಗಿದೆ‘ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಗವಿಸಿದ್ಧಪ್ಪ ಕೊಪ್ಪಳ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕವಿ ಮಹೇಶ ಬಳ್ಳಾರಿ ಅವರ ‘ದುಬೈ ದೌಲತ್ತು’ ಪ್ರವಾಸಿ ಕಥನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ‘ಕವಿಯ ಸೂಕ್ಷ್ಮ ಅವಲೋಕನಗಳನ್ನು ಕೃತಿಯಲ್ಲಿ ಕಾಣಬಹುದು’ ಎಂದರು.
ಭಾರತೀಯ ಜೀವವಿಮಾ ನಿಗಮದ ನಿವೃತ್ತ ಅಧಿಕಾರಿ ವೆಂಕಟೇಶ ಶ್ಯಾನಭಾಗ್ ಮಾತನಾಡಿ ‘ಈ ಕೃತಿಯು ದುಬೈ ಹೋಗಬೇಕಾದವರಿಗೆ ಸೂಕ್ತ ತಿಳಿವಳಿಕೆ ನೀಡುವಂತಿದೆ. ಅದ್ಭುತಗಳ ನಾಡು ದುಬೈ ಮೀನು ಹಿಡಿಯುವವರ ದೇಶವಾಗಿತ್ತು. ಇದೀಗ ಇಡೀ ಜಗತ್ತು ತನ್ನ ಕಡೆ ಸೆಳೆಯುವಂತಹ ನೆಲವಾಗಿದೆ. ದುಬೈ ಐತಿಹ್ಯಗಳೆಲ್ಲ ಈ ಪುಸ್ತಕದಲ್ಲಿ ಅಡಕವಾಗಿದೆ’ ಎಂದು ಹೇಳಿದರು. ವಾಣಿಜ್ಯೋದ್ಯಮಿ ಮಲ್ಲಿಕಾರ್ಜುನ ಬಳ್ಳೊಳ್ಳಿ ಕೃತಿ ಲೋಕಾರ್ಪಣೆ ಮಾಡಿದರು.
ಮಹೇಶ ಬಳ್ಳಾರಿಯವರ ‘ನಾಡಕವಿತೆ’ ಯೂ ಟ್ಯೂಬ್ ಚಾನೆಲ್, ‘ಗಾಂಧೀಜಿ ಮತ್ತು ಕೊಪ್ಪಳ’ ವಿಡಿಯೊ ಕ್ಲಿಪ್ ಶಿವಮೂರ್ತಿ ಹೊಸಮನಿ, ಆನಂದ ಗೊಂಡಬಾಳ, ಶರಣು ಉಂಕಿ ಉದ್ಘಾಟಿಸಿದರು.
ಲೇಖಕ ಮಹೇಶ ಬಳ್ಳಾರಿ, ಪ್ರಮುಖರಾದ ಪ್ರದೀಪ ಸೋಮಲಾಪುರ, ಡಿ.ಎಂ. ಬಡಿಗೇರ, ಮಹಾಂತೇಶ ಮಲ್ಲನಗೌಡರ, ಗುರುರಾಜ ಹಲಗೇರಿ, ವಿಶ್ವನಾಥ ಬಳ್ಳೊಳ್ಳಿ, ಈರಣ್ಣ ಸಂಕ್ಲಾಪುರ, ಈಶ್ವರ ಹತ್ತಿ, ಮಲ್ಲಿಕಾರ್ಜುನ ಪಾಟೀಲ, ಅಮರದೀಪ, ಶಿ.ಕಾ. ಬಡಿಗೇರ, ವೀರಣ್ಣ ನಿಂಗೋಜಿ, ಮಹಾದೇವ ಸತ್ತಿಗೇರಿ, ಅರುಣಾ ನರೇಂದ್ರ, ಅಮರೇಶ ಅಂಗಡಿ, ಮಹಾಂತೇಶ ನೀಲಗಣಿ, ಶಿವಪ್ರಸಾದ ಹಾದಿಮನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.