ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಬೆಳೆ ವಿಫಲವಾದರೆ ರೈತ ಹತಾಶನಾಗುವುದಿಲ್ಲ. ಮುಂದೆ ಒಳ್ಳೆಯ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಬೀಜಬಿತ್ತಿ ಪ್ರಯತ್ನಿಸುತ್ತಲೇ ಹೋಗುತ್ತಾನೆ. ಹಾಗೆಯೇ, ಒಂದು ಬಾರಿ ಓದಿನಲ್ಲಿ ಹಿನ್ನಡೆಯಾದರೂ ಮರಳಿ ಯತ್ನ ಮಾಡು ಎಂದೆ ತಂದೆ– ತಾಯಿ ನೈತಿಕ ಸ್ಥೈರ್ಯ ತುಂಬಿದ್ದರಿಂದಲೇ ನನಗೆ ಈ ಸಾಧನೆ ಸಾಧ್ಯವಾಯಿತು’.
ಯುಪಿಎಸ್ಸಿ ಪರೀಕ್ಷೆಯಲ್ಲಿ 646ನೇ ರ್ಯಾಂಕ್ ಪಡೆದಿರುವ ತಾಲ್ಲೂಕಿನ ಕಂದಕೂರು ಗ್ರಾಮದ ರಮೇಶ ಗುಮಗೇರಿ ಹೇಳಿದ ಮಾತಿದು.
ಇವರದು ಬಡ ರೈತ ಕುಟುಂಬ.ತಂದೆ ಯಮನಪ್ಪ ಗುಮಗೇರಿ ಹಾಗೂ ತಾಯಿ ಹುಲಿಗೆಮ್ಮ ಅಕ್ಷರ ಕಲಿತಿಲ್ಲ.
‘2018ರ ಮುಖ್ಯ ಪರೀಕ್ಷೆಯಲ್ಲಿ ಕೇವಲ 2 ಅಂಕಗಳಲ್ಲಿ ಅವಕಾಶ ಕೈತಪ್ಪಿತು. ಕುಟುಂಬದವರು ಮತ್ತು ಸ್ನೇಹಿತರು ಪ್ರೋತ್ಸಾಹಿಸಿದ್ದರಿಂದ ಈ ಬಾರಿ ಯಶಸ್ಸು ಸಿಕ್ಕಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿತೆ. ಬಾಗಲಕೋಟೆಯಲ್ಲಿ ಎಂಜಿನಿಯರಿಂಗ್, ಸೂರತ್ಕಲ್ದಲ್ಲಿ ಎಂ.ಟೆಕ್ ಪದವಿ ಪಡೆದಿದ್ದೇನೆ’ ಎಂದು ರಮೇಶ ಹೇಳಿದರು.
‘ಸಾಮಾಜಿಕ ಅನಿಷ್ಟಪದ್ಧತಿಗಳನ್ನು ಹೋಗಲಾಡಿಸುವ, ಬಡವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಅಭಿಲಾಷೆ ನನ್ನದು’ ಎನ್ನುತ್ತಾರೆ ಅವರು.
‘ನೋವು–ಸಂಕಷ್ಟದ ಅರಿವು ರಮೇಶನಿಗೆ ಇದೆ.ಬಡವರಿಗೆ ನೆರವಾಗುತ್ತಾನೆ’ ಎಂದು ಯಮನಪ್ಪ ಗಮಗೇರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.