
ಕೊಪ್ಪಳ: ‘ವಚನ ಸಾಹಿತ್ಯದ ಅಧ್ಯಯನದಿಂದ ಸರ್ವರಲ್ಲೂ ಸಮಾನತೆ ಸೋದರತ್ವದಿಂದ ಬಾಳುವ ಶಕ್ತಿ ಲಭಿಸುತ್ತದೆ. ಆ ಕಾರಣಕ್ಕಾಗಿ ಅಂದು, ಇಂದು, ಮುಂದೆಯೂ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತದೆ’ ಎಂದು ತಾಲ್ಲೂಕಿನ ಯತ್ನಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ವೀರಭದ್ರಯ್ಯ ಹಿರೇಮಠ ಹೇಳಿದರು.
ಯತ್ನಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಶಾಲೆಗೊಂದು ವಚನ ವಾಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ‘12ನೇ ಶತಮಾನದ ಶರಣ-ಶರಣೆಯರ ನಡೆ ನುಡಿಗಳು ಪ್ರಸುತ್ತ, ಅವರ ತತ್ವ ಸಿದ್ದಾಂತಗಳನ್ನು ಮಕ್ಕಳು, ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನ ಸಾರ್ಥವಾಗುತ್ತದೆ’ ಎಂದರು.
ಸಂಗೀತ ಕಲಾವಿದ ಅನ್ನಪೂರ್ಣ ಎಂ., ಮಾತನಾಡಿ, ’ಶರಣ-ಶರಣಿಯರು ಈ ನಾಡಿನ ಬೆಲೆ ಕಟ್ಟಲಾಗದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ನಾವು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹಾಲು ತೊರಗೆ ಬೆಲ್ಲದ ಕೆಸರು ಸಕ್ಕರೆಯ ಮಳ್ಳಲಿನಂತೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ವಚನ ವಾಚನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಾದ ಮೆಹಬೂಬ್ ನದಾಫ್, ಭವಾನಿ ಕೆಂಚನಗೌಡ್ರ, ಧನ್ಯ ಮಂಗಳೂರು, ಖುಷಿ ಟಣಕನಕಲ್, ಸುಷ್ಮಿತಾ ಪೂಜಾರ, ರಾಜೇಶ್ವರಿ ಅವರಿಗೆ ಬಹುಮಾನ ವಿತರಿಸಲಾಯಿತು.
ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮೈಲಾರಪ್ಪ ಉಂಕಿ, ಮೃತುಂಜಯ ಮಳಿಮಠ, ಸಿದ್ದಪ್ಪ ಮೇಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.