ಕೊಪ್ಪಳ: ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಾಣಲು ಬಿ. ಶ್ರೀರಾಮುಲು ಕಾರಣ ಎನ್ನುವ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿಕೆಗೆ
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ಮುಖಂಡರಾದ ಸುರೇಶ ದೊಣ್ಣಿ, ಹನುಮಂತಪ್ಪ ಜೋಗದ ಹಾಗೂ ವೀರಭದ್ರಪ್ಪ ನಾಯಕ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಂದು ಚುನಾವಣೆಯಲ್ಲಿ ಒಬ್ಬರಿಂದಲೇ ಗೆಲ್ಲುವುದಿಲ್ಲ. ಸೋಲುವುದೂ ಇಲ್ಲ. ಪ್ರತಿ ಚುನಾವಣೆಯಲ್ಲಿ ಸಾಮೂಹಿಕ ಜವಾಬ್ದಾರಿ ಇರುತ್ತದೆ ಎಂದರು.
ರಾಮುಲು ವಿರುದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ರಾಜಕೀಯ ವಿಚಾರದಲ್ಲಿ ರಾಮುಲು ಅವರಿಗೆ ರೆಡ್ಡಿ ನೇರವಾಗಿ ಮಾತನಾಡಿದ್ದಾರೆ. ಸೋಲಿನ ಹೊಣೆ ಒಬ್ಬರ ಮೇಲೆಯೇ ಹೊರಿಸಿದ್ದು ರಾಮುಲು ಅವರಿಗೆ ಮಾಡಿದ್ದು ಅವಮಾನ ಎಂದರು.
ರಾಮುಲು ಇಲ್ಲದ ಹೋಗಿದ್ದರೆ, ನಾಯಕ ಸಮಾಜ ನಿಮ್ಮ ಜೊತೆಗೆ ನಿಲ್ಲದಿದ್ದರೆ ರೆಡ್ಡಿ ರಾಜಕೀಯವಾಗಿ ಎಲ್ಲಿರುತ್ತಿದ್ದರು? ರಾಮುಲು ಅವರ ಬಳಿ ಲಾಭ ತೆಗೆದುಕೊಂಡ ರೆಡ್ಡಿ ವಾಪಸ್ ಕೊಟ್ಟಿದ್ದೇನು? ಎಂದು ಪ್ರಶ್ನಿಸಿದರು. ಅಗರ್ವಾಲ್ ಹೇಳಿಕೆಯಿಂದ ರಾಮುಲು ಹಾಗೂ ನಾಯಕ ಸಮಾಜಕ್ಕೆ ಅವಮಾನವಾಗಿದೆ ಎಂದರು.
ನಮ್ಮ ಸಮಾಜದ ನಾಯಕನಿಗೆ ಅನ್ಯಾಯವಾದರೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು, ರೆಡ್ಡಿ ನಾಯಕ ಸಮಾಜದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಯಾರೂ ಗಂಡಸರು ಇರಲಿಲ್ಲವೇ? ಆಗ ರಾಮುಲು ಬೇಕಾಯಿತೇ? ಈಗ ಯಾಕೆ ನಮ್ಮ ಸಮಾಜದ ನಾಯಕನಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.