ಗಂಗಾವತಿ: ಕೋವಿಡ್ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಣೆ ಮಾಡಬೇಕು ಎಂದು ತಹಶೀಲ್ದಾರ್ ಯು.ನಾಗರಾಜ್ ಹೇಳಿದರು.
ನಗರದ ಶ್ರೀ ಕೃಷ್ಣ ದೇವರಾಯ ಕಲಾ ಭವನದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮೂಹಿಕ ಮೇರವಣಿಗೆ ನಿಷೇಧಿಸಲಾಗಿದೆ. ವಾಲ್ಮೀಕಿ ಜಯಂತಿ ಆಚರಣೆಯ ಸಮಾರಂಭಗಳಲ್ಲಿ ನೂರಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಜೋಗದ ನಾರಾಯಣಪ್ಪ ಮಾತನಾಡಿ, ಇತ್ತೀಚೆಗೆ ಅಧಿಕೃತ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.ಅಲ್ಲಿ ಯಾವ ರಾಜಕಾರಣಿ, ಅಧಿಕಾರಿ, ಜನರಿಗೂ ಕೋವಿಡ್ ನಿಯಮಾವಳಿ ಅನ್ವಯಿಸಲಿಲ್ಲ. ಆದರೆ ವಾಲ್ಮೀಕಿ ಜಯಂತಿಗೆ ಅನ್ವಯಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆಗೆ ಒಂದು ನ್ಯಾಯ, ಕೊಪ್ಪಳಕ್ಕೆ ಒಂದು ನ್ಯಾಯ ಮಾಡಬೇಡಿ, ಎಲ್ಲವನ್ನು ಪರಿಪಾಲನೆ ಮಾಡುತ್ತಿರುವುದು ಒಂದೇ ಸರ್ಕಾರ. ಆದ್ದರಿಂದ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲು ತಾಲ್ಲೂಕು ಆಡಳಿತ ಅನುಮತಿ ನೀಡಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದರು.
ಈ ವೇಳೆಯಲ್ಲಿ ತಹಶೀಲ್ದಾರ ನಾಗರಾಜ ಮಾತನಾಡಿ, ಇನ್ನೂ ವಾಲ್ಮೀಕಿ ಜಯಂತಿ ಆಚರಣೆಗೆ ಎಂಟು ದಿನಗಳು ಬಾಕಿ ಇದ್ದು, ಅಧಿಕಾರಿಗಳು ಕುರಿತು ಚರ್ಚಿಸಿ, ಸಮಾಜದ ಬೇಡಿಕೆಗಳು ಈಡೇರಿಸುವುದಾಗಿ ಭರವಸೆ ನೀಡಿದರು.
ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಬಿಇಓ ಸೋಮಶೇಖರ್ ಗೌಡ, ಮಲ್ಲೇಶಪ್ಪ ಹೊಸಮನಿ, ವೀರಭದ್ರಪ್ಪ ನಾಯಕ, ಗ್ರೇಡ್ 2 ತಹಶೀಲ್ದಾರ್ ವಿ.ಎಚ್.ಹೊರಪೇಟಿ, ಜೋಗದ ನಾರಾಯಣಪ್ಪ, ಜೋಗದ ಹನುಮಂತಪ್ಪ, ಜೋಗದ ದಳಪತಿ ನಾಯಕ ರಮೇಶ್ ಚೌಡ್ಕಿ, ಅರ್ಜುನ ನಾಯಕ, ವಿರುಪಾಕ್ಷಿ ಹೇರೂರ್, ನಗರಸಭೆ ಆರೋಗ್ಯ ನಿರೀಕ್ಷಕ ನಾಗರಾಜ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.