
ಗಂಗಾವತಿ: ಇಲ್ಲಿನ ಸಿದ್ದಿಕೇರಿ ರಸ್ತೆಯಲ್ಲಿನ ಶಂಕರ ಮಠದ ಶಾರದಾದೇವಿ ದೇವಸ್ಥಾನದಲ್ಲಿ ಸೋಮವಾರ ಶೃಂಗೇರಿ ಪೀಠದ 36ನೇ ಪೀಠಾಧಿಪತಿ ಶ್ರೀಭಾರತಿ ತೀರ್ಥಸ್ವಾಮಿಗಳ 74ನೇ ವರ್ಷದ ವರ್ಧಂತಿ ಮಹೋತ್ಸವ ಜರುಗಿತು.
ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶಾರದಾ ದೇವಿಗೆ ಪಂಚಾಮೃತ, ಕುಂಕುಮಾರ್ಚನೆ, ಮಹಾಮಂಗಳಾರತಿ, ವಿಶೇಷ ಹೂವಿನ ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ದೇವಸ್ಥಾನ ಧರ್ಮದರ್ಶಿ ಸುದರ್ಶನ ವೈದ್ಯ ಮಾತನಾಡಿ,‘ವರ್ಧಂತಿ ಮಹೋತ್ಸವ ಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಾಲಾಶುಲ್ಕ, ಲ್ಯಾಪ್ಟಾಪ್ ವಿತರಣೆ, ಗೋ ಸಂರಕ್ಷಣೆಗೆ ಮೇವು ಹಂಚಿಕೆ ಸೇರಿ ಹಲವು ರೀತಿಯ ಸಾಮಾಜಿಕ ಕಾರ್ಯಗಳು ಮಾಡಲಾಗುತ್ತಿದೆ’ ಎಂದು ಹೇಳಿದರು.
ನಂತರ ಭಜನಾ ಮಂಡಳಿಗಳಿಂದ ಭಜನೆ, ಪಾರಾಯಣ, ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಸೇರಿ ಹಲವು ಕಾರ್ಯಕ್ರಮಗಳು ಜರುಗಿದವು.
ಶ್ರೀಪಾದರಾವ ಮುಧೋಳಕರ, ಅರ್ಚಕ ಕುಮಾರಭಟ್, ರಾಘವೇಂದ್ರ ಅಳವಂಡಿಕರ್, ವೇಣುಗೋಪಾಲ, ಶೇಷಗಿರಿ ಗಡಾದ್, ಜಗನ್ನಾಥ ಅಳವಂಡಿಕರ್, ಶಂಕರ ಹೊಸಳ್ಳಿ, ಬೇವಿನಾಳ ಪ್ರಲ್ಹಾದ್ ಆಚಾರ್, ಕಾಶೀನಾಥ ಭಟ್ ಸೇರಿ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.