ತಾವರಗೇರಾ: ಪಟ್ಟಣದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ಅಪಾರ ಭಕ್ತ ಸಮೂಹದ ಮಧ್ಯ ಮಹಾ ರಥೋತ್ಸವ ಜರುಗಿತು.
ಭಕ್ತರು ಬಾಳೆಹಣ್ಣು, ಉತ್ತತ್ತಿಗಳನ್ನು ಬೃಹತ್ ಹೂಮಾಲೆಹೊಂದಿಗೆ ಶೃಂಗಾರಗೊಂಡ ತೇರಿಗೆ ಸಮರ್ಪಣೆ ಮಾಡುವ ಮೂಲಕ ಭಕ್ತಿ ಸೇವೆ ಸಲ್ಲಿಸಿದರು.
ಬೆಳಿಗ್ಗೆ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಮಾಡಲಾಯಿತು. ಕರಿವೀರಣ್ಣ ದೇವಸ್ಥಾನದಿಂದ ಸುಮಂಗಲೆಯರ 101 ಕುಂಭ, ಕಳಸ ಮತ್ತು ವೀರಗಾಸೆ, ಗುಗ್ಗಳ, ಉತ್ಸವ ಮೂರ್ತಿ, ಭಜನೆ ವಾದ್ಯಗಳೊಂದಿಗೆ ವೀರಭದ್ರೇಶ್ವರ ಮೂರ್ತಿ ಮೆರವಣಿಗೆ ನಡೆಯಿತು.
ನಂತರ ಅಗ್ನಿ ತುಳಿತ, 26 ಅಯ್ಯಾಚಾರ ಕಾರ್ಯಕ್ರಮ ಮತ್ತು 13 ಜೋಡಿ ಸಾಮೂಹಿಕ ವಿವಾಹ ಜರುಗಿದವು. ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯರು, ಗುಮ್ಮಗೋಳದ ಚಂದ್ರಶೇಖರ ಸ್ವಾಮೀಜಿ, ಅಂಕಲಿಮಠದ ವೀರಭದ್ರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಧಾರ್ಮಿಕ ವಿಧಿ, ವಿಧಾನಗಳನ್ನು ನಡೆಸಿಕೊಟ್ಟರು.
ಸುತ್ತಲಿನ ಗ್ರಾಮಗಳ ಭಕ್ತರು, ಸ್ಥಳಿಯ ವಿವಿಧ ಸಮುದಾಯದ ಮುಖಂಡರು, ಜಾತ್ರಾ ಸಮಿತಿ ಪದಾಧಿಕಾರಿಗಳು ಇದ್ದರು. ಆವರಣದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.