ADVERTISEMENT

ವೇಮನ ಲೋಕಶಾಂತಿ ಸಾರಿದ ಮಹನೀಯ

ಮಹಾಯೋಗಿ ವೇಮನ ಜಯಂತಿ: ಶಾಸಕ ಹಿಟ್ನಾಳ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 9:25 IST
Last Updated 21 ಜನವರಿ 2020, 9:25 IST
ಕೊಪ್ಪಳದ ಹೇಮರಡ್ಡಿ ಮಲ್ಲಮನ ದೇವಸ್ಥಾನದಲ್ಲಿ ಭಾನುವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿದರು
ಕೊಪ್ಪಳದ ಹೇಮರಡ್ಡಿ ಮಲ್ಲಮನ ದೇವಸ್ಥಾನದಲ್ಲಿ ಭಾನುವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿದರು   

ಕೊಪ್ಪಳ: ಮಹಾಯೋಗಿ ವೇಮನರು ಲೋಕ ಶಾಂತಿಯನ್ನು ಸಾರಿದ ಮಹಾತ್ಮರು. ಅವರ ಜೀವನದ ಮೂಲಕ ಮನುಕುಲಕ್ಕೆ ಮಹತ್ತರ ಸಂದೇಶವನ್ನು ನೀಡಿದರು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಹೇಮರಡ್ಡಿ ಮಲ್ಲಮನ ದೇವಸ್ಥಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೇಮನರು ಜಾತಿ, ಧರ್ಮಗಳನ್ನು ಮೀರಿ ಲೋಕ ಶಾಂತಿ ಸಾರಿದರು. ಆದರ್ಶದ ಜೀವನವನ್ನು ನಡೆಸಿ ಸಮಾಜಕ್ಕೆ ಅನುಕರಣೀಯ ತತ್ವಗಳನ್ನು ತಮ್ಮ ವಚನಗಳ ಮೂಲಕ ಬೋಧಿಸಿದರು. ಅವರ ಜೀವನದ ಆದರ್ಶಗಳನ್ನು ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು.

ADVERTISEMENT

ಇರಕಲ್ಲಗಡಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ ವಿಶೇಷ ಉಪನ್ಯಾಸ ನೀಡಿ,‘ವೇಮನ ಕ್ರಿ.ಶ. 1412ರಲ್ಲಿ ರಾಜಮನೆತನದ ಕುಮಾರಗಿರಿರಡ್ಡಿ ಅವರ ಮಗನಾಗಿ ಜನಿಸಿದರು. ಗುರುಸ ಸೋಮಶೇಖರರಿಂದ ತತ್ವಜ್ಞಾನಿಯಾಗಿ ರಾಜಯೋಗಿಯಾದರು. ಅವರ ಅತ್ತಿಗೆಯಾದ ಹೇಮರಡ್ಡಿ ಮಲ್ಲಮ್ಮನವರ ಪ್ರಭಾವದಿಂದ ಜೀವನದ ನಶ್ವರತೆ ಅರಿತು ರಾಜಭೋಗಗಳನ್ನು ತೊರೆದು ವಿರಾಗಿಯಾದರು. ಸ್ವ-ಅನುಭವ ಸಾರ್ವಭೌಮರಾದರು ಎಂದರು.

ತಮ್ಮ ಜೀವನದ ಅನುಭವಗಳಿಂದಲೇ ಜನಮಾನಸದಲ್ಲಿ ಉಳಿಯುವಂತ ತ್ರಿಪದಿ, ಚೌಪದಿಗಳನ್ನು ರಚಿಸಿದರು. ಇವುಗಳು ಜನಸಾಮಾನ್ಯರ ತೆಲುಗು ಭಾಷೆಯಲ್ಲಿ ಇದ್ದವು. ಹಾಗಾಗಿ ಪದ್ಯಗಳು ಜನಮಾನಸದಲ್ಲಿ ಉಳಿದಿವೆ. ವೇಮನರ ಪದ್ಯಗಳನ್ನು ಹುಲಕೋಟಿಯ ವೇಮನ ಪೀಠದ ವತಿಯಿಂದ ಎಸ್.ಆರ್. ಪಾಟೀಲ್ ಅವರು ವೇಮನ ಮೀಮಾಂಸೆ ಎಂಬ ಹೆಸರಿನಲ್ಲಿ ಕನ್ನಡ ಭಾಷೆಗೆ ಅನುವಾದಿಸಿದ್ದಾರೆ ಎಂದರು.

ವೇಮನರು ಲೋಕಸತ್ಯ, ದೈವಸತ್ಯ ಹಾಗೂ ಜೀವನ ಮೌಲ್ಯಗಳನ್ನು ಆಡು ಭಾಷೆಗಳ ಮೂಲಕ ಜನರಿಗೆ ತಲುಪಿಸಿದರು. ಜಾತಿ ಭೇದಗಳನ್ನು ವಿರೋಧಿಸಿ ಸಮಾನತೆಯನ್ನು ಸಾರಿದರು. ಅವರ ತತ್ವ ಆದರ್ಶಗಳು ಇಂದಿನ ಯುವಜನತೆಗೆ ಅನುಕರಣೀಯವಾಗಿವೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ತಹಶೀಲ್ದಾರ ಜೆ.ಬಿ.ಮಜ್ಗಿ, ನಗರಸಭೆ ಪೌರಾಯುಕ್ತ ಮಂಜುನಾಥ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಮಹಾಂತೇಶ ಮಲ್ಲನಗೌಡರ, ಸಮಾಜದ ಮುಖಂಡರಾದ ಪ್ರಭು ಹೆಬ್ಬಾಳ, ಸಿ.ವಿ. ಚಂದ್ರಶೇಖರ, ನವೋದಯ ವಿರುಪಣ್ಣ, ಎಚ್.ಎಲ್‌.ಹಿರೇಗೌಡರ್, ಕೆಎಂಎಫ್‌ ಅಧ್ಯಕ್ಷ ಸುರೇಶ ಮಾದಿನೂರು, ಬಸವರಡ್ಡಿ ಹಳ್ಳಿಕೇರಿ, ಭರಮಪ್ಪ ನಗರ ಇದ್ದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.