ADVERTISEMENT

ತುಂಗಾಭದ್ರ ಜಲಾಶಯದಿಂದ ನದಿಗೆ ನೀರು | ಕಂಪ್ಲಿ ಸೇತುವೆ ಮುಳುಗಡೆ: ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:19 IST
Last Updated 27 ಜುಲೈ 2024, 14:19 IST
ಗಂಗಾವತಿ-ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮುಳಗಡೆಯಾಗಿರುವುದು
ಗಂಗಾವತಿ-ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮುಳಗಡೆಯಾಗಿರುವುದು    

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.50 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಟ್ಟಿದ್ದು, ಶನಿವಾರ ಗಂಗಾವತಿ-ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ, ರಸ್ತೆ ಸಂಚಾರ ಬಂದ್ ಆಗಿದೆ.

ತುಂಗಭದ್ರಾ ಜಲಾಶಯಕ್ಕೆ ಮೇಲಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕಳೆದ 3-4 ದಿನಗಳಿಂದ ನದಿಗೆ ಹಂತ ಹಂತವಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ ಕಂಪ್ಲಿ ಸೇತುವೆ, ಬೀದರ್‌, ಕಲಬುರಗಿ, ಹೈದರಾಬಾದ್‌, ಮಂತ್ರಾಲಯ ಸೇರಿದಂತೆ ಪ್ರಮುಖ ನಗರಗಳಿಗೆ ವಾಹನ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕು ಆಡಳಿತ ವಾಹನ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಸೂಚಿಸಿ, ಕಂಪ್ಲಿ ಸೇತುವೆ ಮೇಲಿನ ಸಂಚಾರಕ್ಕೆ ಆದೇಶ ನೀಡುವವರೆಗೆ ಬುಕ್ಕಸಾಗರ ಸೇತುವೆ ಮೇಲೆ ವಾಹನ ಸಂಚಾರ ಮಾಡುವಂತೆ ಆದೇಶ ಹೊರಡಿಸಿದೆ.

ADVERTISEMENT

ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲದ ಕಾಲು ಸೇತುವೆ, ಚಕ್ರತೀರ್ಥ, ತಳವಾರಘಟ್ಟ, ಗಣೇಶ ದೇವಾಲಯ, ಚಂದ್ರಮೌಳೇಶ್ಚರ ದೇವಸ್ಥಾನ, ಋಷಿ ಮುಖ ಪರ್ವತ ನೀರಿನಲ್ಲಿವೆ. ಹಂಪಿಯ ರಾಮ-ಲಕ್ಷ್ಮಣ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿದೆ.

ವಿರುಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗೊಂದಿ ಶ್ರೀಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಸಂಪೂರ್ಣ ಜಲಾವೃತವಾಗಿ, ನವವೃಂದಾವನ ಜನರ ಸಂಪರ್ಕ ಕಳೆದುಕೊಂಡಿದೆ.

ಹನುಮನಹಳ್ಳಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗದ ನದಿಪಾತ್ರದಲ್ಲಿರುವ ಭತ್ತ, ಕಬ್ಬು, ಬಾಳೆ ತೋಟಗಳು ಜಲಾವೃತವಾಗಿ, ನೀರಿನ ರಭಸಕ್ಕೆ ಕೆಲವಡೆ ಕಣಿವೆಗಳು ಕೊಚ್ಚಿಹೋಗಿವೆ.

ಕಂಪ್ಲಿ- ಗಂಗಾವತಿ ಸೇತುವೆ 1944 ಅಡಿ ಉದ್ದ, 22 ಅಡಿ ಅಗಲ ಇದ್ದು, ಅದರ 38 ಅಡಿಯ 51 ಕಮಾನುಗಳಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಾಭದ್ರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಹಾಗಾಗಿ ಶನಿವಾರ ನದಿಗೆ ಜಲಾಶಯದಿಂದ 1.50ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಹಾಗೇ ಜಲಾಶಯಕ್ಕೆ ಹೆಚ್ಚಿನ ನೀರು ಬಂದರೆ, ಇನ್ನಷ್ಟು ನೀರು ನದಿಗೆ ಹರಿಸುವ ಮುನ್ಸೂಚನೆಯನ್ನು ತುಂಗಭದ್ರಾ ನೀರಾವರಿ ಬೋರ್ಡ್ ನೀಡಿದೆ.

ಅಪಾಯಮಟ್ಟದಲ್ಲಿ ನೀರು ಹರಿಸುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಸೆಲ್ಫಿ ತೆಗೆದುಕೊಳ್ಳಲು ತೆರಳಬಾರದು. ಜಾನುವಾರುಗಳನ್ನು ಮೇಯಿಸಬಾರದು, ನದಿಪಾತ್ರದಲ್ಲಿ ಮನೆ ಇರುವವರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಎಚ್ಚರಿಕೆ ಸಂದೇಶ ಕೊಟ್ಟಿದೆ. ನದಿಪಾತ್ರದ ಗ್ರಾಮಗಳಲ್ಲಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಸಾಣಾಪುರ ಗ್ರಾಮದ ಭತ್ತದ ಜಮೀನುಗಳಿಗೆ ನೀರು ನುಗ್ಗಿರುವುದು
1.50ಲಕ್ಷ ಕ್ಯುಸೆಕ್ ನೀರು ನದಿಗೆ ಕಂಪ್ಲಿ ಸೇತುವೆ ಮುಳಗಡೆಕೊಚ್ಚಿಹೋದ ಕಣಿವೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.