ಕೊಪ್ಪಳ: ತುಂಗಭದ್ರಾ ಜಲಾಶಯದ ಎಡ, ಬಲ ಮತ್ತು ವಿಜಯನಗರ ಕಾಲುವೆಗಳಿಗೆ ಭಾನುವಾರ ನೀರು ಹರಿಸಲಾಯಿತು.
ಶಾಸಕರಾದ ಪರಣ್ಣ ಮುನವಳ್ಳಿ, ಕೆ.ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ಎಚ್.ಎಂ.ತಿಪ್ಪೇರುದ್ರಸ್ವಾಮಿ, ಕೆಡಿಪಿ ಸದಸ್ಯ ಅಮರೇಶ ಕರಡಿ ಜಂಟಿಯಾಗಿ ಕ್ರಸ್ಟ್ಗೇಟ್ಗಳಿಗೆ ಪೂಜೆ ಸಲ್ಲಿಸಿ ನೀರು ಬಿಡುಗಡೆಗೆ ಚಾಲನೆ ನೀಡಿದರು.
ಮುಖಂಡ ಅಮರೇಶ ಕರಡಿ ಮಾತನಾಡಿ,‘ರಾಜ್ಯದಲ್ಲಿ ಇನ್ನೂ ಯಾವ ಜಲಾಶಯದಿಂದಲೂ ಕಾಲುವೆಗೆ ನೀರು ಬಿಟ್ಟಿಲ್ಲ. ಅವಧಿಗೆ ಮುಂಚೆಯೇ ನೀರು ಬಿಡುವ ಮೂಲಕ ಬಿಜೆಪಿ ಸರ್ಕಾರ ರೈತಪರ ಸರ್ಕಾರ ಎಂದು ಸಾಬೀತು ಮಾಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅವಧಿಗೆ ಮುಂಚೆಯೇ ತುಂಬುತ್ತಿದೆ. ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ರೈತರ ಎರಡು ಬೆಳೆಗೆ ಸಮಸ್ಯೆಯಾಗದಂತೆ ನೀರು ದೊರೆಯುತ್ತಿರುವುದು ನಮ್ಮ ನಾಡಿನ ಪುಣ್ಯ‘ ಎಂದರು.
115ನೇ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜು.18 ರಿಂದ ನ.30 ರವರೆಗೆ ಜಲಾಶಯದಿಂದ ನೀರು ಹರಿಸುವುದಕ್ಕೆ ಅಧಿಕೃತವಾಗಿ ಚಾಲನೆನೀಡಲಾಗಿದೆ ಎಂದರು.
ಕಾಡಾ ಅಧ್ಯಕ್ಷ ಎಚ್.ಎಂ.ತಿಪ್ಪೇರು
ದ್ರಸ್ವಾಮಿ ಮಾತನಾಡಿ,‘ಎಡದಂಡೆ ಮುಖ್ಯ ಕಾಲುವೆಗೆ ಜು.18 ರಿಂದ 4100 ಕ್ಯುಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1130 ಕ್ಯುಸೆಕ್., ಬಲದಂಡೆ ಕೆಳಮಟ್ಟದ ಕಾಲುವೆಗೆ 700 ಕ್ಯುಸೆಕ್ನಂತೆ ನ.30 ರವರೆಗೆ, ರಾಯ ಬಸವ ಕಾಲುವೆಗೆ ಜೂ.1 ರಿಂದ ಡಿ.10 ರವರೆಗೆ 235 ಕ್ಯುಸೆಕ್, ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 18 ರಿಂದ 25 ಕ್ಯುಸೆಕ್ನಂತೆ ನ.30 ರವರೆಗೆ ನೀರು ಹರಿಸಲಾಗುತ್ತದೆ’ ಎಂದರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,‘ಕಾಲುವೆಗೆ ಮುಂಚಿತವಾಗಿ ನೀರು ಬಿಡುವುದರಿಂದ ಭತ್ತ ಬೆಳೆಗಾರರು ನಿಗದಿತ ಸಮಯದಲ್ಲಿ ಭತ್ತ ನಾಟಿ ಮಾಡಲು ಅನುಕೂಲವಾಗುತ್ತದೆ. ಕಾಲುವೆಯ ಕೊನೆಯ ಭಾಗದವರೆಗೆ ನೀರು ಹರಿಸಬೇಕು ಎಂಬುವುದು ನಮ್ಮ ಸರ್ಕಾರದ ಸಂಕಲ್ಪ. ಹೀಗಾಗಿ ರೈತರು ಅಕ್ರಮವಾಗಿ ತೋಡುಗಳನ್ನು ಮಾಡಿ ನೀರನ್ನು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಮನವಿ ಮಾಡಿದರು. ಮುಖಂಡರಾದ ಫಾಲಾಕ್ಷಪ್ಪ, ಬಸವರಾಜ, ಪ್ರದೀಪ್ ಹಿಟ್ನಾಳ, ಮಹಾಂತೇಶ, ಬಸವರಾಜ ಪಾಟೀಲ, ಬಾಲಚಂದ್ರನ್, ಜಲಾಶಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.