ADVERTISEMENT

ಕುಷ್ಟಗಿ: ವರ್ಷದೊಳಗೆ ಕೆರೆಗಳಿಗೆ ನೀರು; ದೃಢಸಂಕಲ್ಪ

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 8:10 IST
Last Updated 27 ಜೂನ್ 2020, 8:10 IST
ಕುಷ್ಟಗಿ ತಾಲ್ಲೂಕು ಮುದುಟಗಿ ಬಳಿ ಕೆರೆ ತುಂಬಿಸುವ ಕಾಮಗಾರಿಗೆ ಸಚಿವ ರಮೇಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು
ಕುಷ್ಟಗಿ ತಾಲ್ಲೂಕು ಮುದುಟಗಿ ಬಳಿ ಕೆರೆ ತುಂಬಿಸುವ ಕಾಮಗಾರಿಗೆ ಸಚಿವ ರಮೇಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು   

ಕುಷ್ಟಗಿ: ಮುಂದಿನ ವರ್ಷದ ಜುಲೈ ವೇಳೆಗೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲು ದೃಢಸಂಕಲ್ಪ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಶುಕ್ರವಾರ ಹೇಳಿದರು.

ತಾಲ್ಲೂಕಿನ ಮುದುಟಗಿ ಬಳಿ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಕೊಪ್ಪಳ ಏತ ನೀರಾವರಿ 2ನೇ ಹಂತದ ಕಾಮಗಾರಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು
ಮಾತನಾಡಿದರು.

ಕಾಮಗಾರಿ ಅನುಷ್ಠಾನದ ವಿಷಯದಲ್ಲಿ ಎಷ್ಟೇ ಕಠಿಣ ಪ್ರಸಂಗಗಳು ಬಂದರೂ ಅವುಗಳನ್ನು ಎದುರಿಸಿ ಈ ಭಾಗದ ಜಮೀನುಗಳಿಗೆ ನೀರುಣಿಸುವ ಮೂಲಕ ಬರದ ನಾಡು ಎಂಬ ಹಣೆಪಟ್ಟಿಯನ್ನು ತೊಲಗಿಸಲಾಗುವುದು ಎಂದರು.

ADVERTISEMENT

ನೀರಾವರಿ ವಿಚಾರದಲ್ಲಿ ಪಕ್ಷ ಅಥವಾ ಜಾತಿಗೆ ಮಣೆಹಾಕದೆ ಪಕ್ಷಾತೀತವಾಗಿ ರೈತರಿಗೆ ನ್ಯಾಯ ಒದಗಿಸಬೇಕೆಂಬುದು ಎಂಬುದು ನನ್ನ ಆಶಯ. ರೈತರೂ ಸಹಕಾರ ನೀಡಬೇಕು ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಯೋಜನೆಗಳಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಂದು ಪೈಸೆ ಹಣ ನೀಡಿರಲಿಲ್ಲ. ಆದರೆ, ರಮೇಶ್ ಜಾರಕಿಹೊಳಿ ಅವರು ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ತುಂಗಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಚಿಂತನೆ ನಡೆಸಿರುವುದು ಅಂಭಿನಂದನೀಯ ಎಂದು ಹೇಳಿದರು.

ಶಾಸಕ ಅಮರೇಗೌಡ ಬಯ್ಯಾಪುರ, ಲಾಕ್‌ಡೌನ್‌ನಿಂದ ಆಗಿರುವ ಆರ್ಥಿಕ ಸಂಕಷ್ಟದ ನಡುವೆಯೂಸರ್ಕಾರ ಇಲ್ಲಿಯ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ನಿಗಮದ ಮುಖ್ಯ ಎಂಜಿನಿಯರ್ ರಂಗರಾಮ್ ಯೋಜನೆಯ ರೂಪುರೇಶೆ ವಿವರಿಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.