ಗಂಗಾವತಿ: ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಓದುವ ಹವ್ಯಾಸ ಮತ್ತು ಬರವಣಿಗೆ ರೂಢಿಸಿಕೊಳ್ಳಬೇಕು’ ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ವಿ.ತಾಳಿಕೋಟಿ ಸಲಹೆ ನೀಡಿದರು.
ನಗರದ ಶ್ರೀಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಬುಧವಾರ ನಡೆದ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪತ್ರಿಕೋದ್ಯಮದ ವಿದ್ಯಾರ್ಥಿಗಳು ನಿತ್ಯ ಕನ್ನಡ-ಇಂಗ್ಲಿಷ್ ಪತ್ರಿಕೆಗಳನ್ನು ಓದಬೇಕು. ಸುದ್ದಿಗಳನ್ನು ಪರಿಣಾಮಕಾರಿಯಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
‘ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ನಿಮ್ಮ ಆಯ್ಕೆಯ ಹುದ್ದೆಯ ಕಡೆ ಹೆಚ್ಚು ಶ್ರಮವಹಿಸಿ, ಕಲಿಯುವಾಗಲೇ ಶ್ರದ್ದೆಯಿಂದ ಕಲಿತರೆ ಉದ್ಯೋಗ ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೆಗೆ ಲೇಖನ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಜತೆಗೆ ಪ್ರಚಲಿತ ವಿದ್ಯಾಮಾನಗಳ ಕುರಿತು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಂತರ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಜಿ.ಹೆಬಸೂರ್ ಮಾತನಾಡಿ,‘ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವಾರು ದಿಗ್ಗಜ ಪತ್ರಕರ್ತರು ತಮ್ಮದೇ ಆದ ಛಾಪನ್ನು ಮೂಡಿಸಿ ಹೋಗಿದ್ದಾರೆ. ಅವರ ಆದರ್ಶಗಳನ್ನು, ಕೌಶಲಗಳನ್ನು ನೀವು ಅಳವಡಿಸಿಕೊಂಡು ಉತ್ತಮ ಪತ್ರಕರ್ತರಾಗಬೇಕು’ ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ ರೆಹಮಾನ್, ಪ್ರಾಧ್ಯಾಪಕ ಡಾ.ಇಮ್ಯಾನುವೆಲ್, ಡಾ.ಜಾಜಿ ದೇವೇಂದ್ರಪ್ಪ, ಕರಿಗೂಳಿ, ಡಾ.ವೈ.ಎಸ್.ವಗ್ಗಿ, ಡಾ.ಸೆಲ್ವರಾಜ್, ಉಪನ್ಯಾಸಕರಾದ ರಾಘವೇಂದ್ರ ಚೌಡ್ಕಿ, ಖಾಜಾಸಾಬ್ ಗಡಾದ್, ಶಿವಕುಮಾರ್ ಕೆ, ರಾಘವೇಂದ್ರ ಜಂಗ್ಲಿ ಹಾಗೂ ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.