ADVERTISEMENT

ಮೂರು ಅಂಗಡಿ ಭಸ್ಮ: ಮಲಗಿದ್ದ ಯುವಕ ಸಜೀವ ದಹನ

ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ, ಕುಟುಂಬಕ್ಕೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:31 IST
Last Updated 14 ಫೆಬ್ರುವರಿ 2021, 3:31 IST
ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದರು
ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದರು   

ಕೊಪ್ಪಳ: ಲಾರಿ ಡಿಕ್ಕಿ ಹೊಡೆದಿದ್ದರಿಂದ ವಿದ್ಯುತ್‌ ತಂತಿ ತುಂಡಾಗಿ ಬೆಂಕಿ ಹೊತ್ತಿಕೊಂಡು, ಹಣ್ಣಿನ ಅಂಗಡಿಯಲ್ಲಿ ಮಲಗಿದ್ದ ಯುವಕ ವೀರೇಶ ಮುಂಡರಗಿ (18) ಸಜೀವ ದಹನವಾಗಿದ್ದಾರೆ.

ನಗರದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಯ ಮೂರು ಅಂಗಡಿಗಳು ಭಸ್ಮವಾಗಿವೆ. ಇಂದಿರಾ ಕ್ಯಾಂಟೀನ್‌ಗೆ ಹೊಂದಿಕೊಂಡಿರುವಶಾಲೆ ಆವರಣದಲ್ಲಿ ಮೂರು ಮಳಿಗೆಗಳಿವೆ. ಪಕ್ಕದಲ್ಲಿಯೇ ವಿದ್ಯುತ್‌ ಕಂಬ ಇದೆ. ಶನಿವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಲಾರಿಯೊಂದು ಅಂಗಡಿಗೆ ಡಿಕ್ಕಿ ಹೊಡೆದಿದೆ. ವಿದ್ಯುತ್‌ ತಂತಿ ಹರಿದು ಬಿದ್ದು ಬೆಂಕಿ ಹೊತ್ತಿಕೊಂಡಿದೆ.ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.

ಸುಟ್ಟ ಸ್ಥಿತಿಯಲ್ಲಿದ್ದ ಯುವಕನ ಮೃತದೇಹವನ್ನು ಹೊರತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿ
ಸಿದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ಹಣ್ಣಿನ ಅಂಗಡಿ, ಪಾದರಕ್ಷೆ, ಗಡಿಯಾರ ದುರಸ್ತಿ ಮಾಡುವ ಅಂಗಡಿಗಳು ಭಸ್ಮವಾಗಿವೆ. ನಗರದ ಜನನಿಬಿಡ ಮುಖ್ಯರಸ್ತೆಯಲ್ಲಿಯೇ ಈ ಘಟನೆ ಸಂಭವಿಸಿದೆ. ಅಂಗಡಿ ಮುಂದೆಯೇ ಕಂಬದಲ್ಲಿ ವಿದ್ಯುತ್‌ ತಂತಿಗಳು ಜೋತಾಡುತ್ತಿದ್ದವು.

ಯುವಕ ವೀರೇಶ ಮುಂಡರಗಿ ಚಿಕ್ಕಪ್ಪ ನಿಂಗಜ್ಜ ಮುಂಡರಗಿ ಅವರಿಗೆ ಸೇರಿದ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಮನೆಗೆ ಮಲಗಲು ಹೋಗುತ್ತೇನೆ ಎಂದು ಹೇಳಿ ಅಂಗಡಿಯಲ್ಲಿ ಮಲಗಿದ್ದ ಎನ್ನಲಾಗಿದೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಸುಟ್ಟ ಸ್ಥಿತಿಯಲ್ಲಿ ಇದ್ದ ಯುವಕನ ಶವ ಪತ್ತೆಯಾಗಿದೆ. ಬೆಳಿಗ್ಗೆ 9 ಗಂಟೆಯಾದರೂ ಯುವಕ ಮನೆಗೆ ಬಾರದೇ ಇದ್ದರಿಂದ ಸ್ನೇಹಿತರನ್ನು ವಿಚಾರಿಸಿ ಕುಟುಂಬದವರು ಪೊಲೀಸ್‌ ಠಾಣೆಗೆ ಬಂದು ವಿಚಾರಿಸಿ
ದಾಗ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ. ಯುವಕನ ತಾಯಿ ಮತ್ತು ಕುಟುಂಬ ಸದಸ್ಯರು ಸುಟ್ಟ ದೇಹ ನೋಡಿ ಅಂಗಡಿ ಎದುರಿನಲ್ಲಿ ಉರುಳಾಡಿ ಆಕ್ರಂದಿಸಿದ್ದು, ಮಮ್ಮಲ ಮರುಗುವಂತೆ ಮಾಡಿತು. ನಂತರ ಪೊಲೀಸರು ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ತೆಗೆದುಕೊಂಡು ಹೋದರು. ನಂತರ ಕುಟುಂಬಕ್ಕೆ ಹಸ್ತಾಂತರಿಸಿದರು.

ಪ್ರಮುಖ ರಸ್ತೆ ಬಳಿ ಈ ಘಟನೆ ನಡೆದಿದ್ದರಿಂದ ನೂರಾರು ಜನರ ನೆರೆದರು. ಸಂಚಾರ ವ್ಯವಸ್ಥೆ, ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಬೆಂಕಿ ಅವಘಢದಿಂದ ಲಕ್ಷಾಂತರ ಬೆಲೆಬಾಳುವ ವಸ್ತುಗಳು ಹಾಳಾಗಿವೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.