ADVERTISEMENT

ಆರತಿ ಉಕ್ಕಡದಲ್ಲಿ ತಡೆ ಒಡೆಸಿಕೊಂಡ ದರ್ಶನ್!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 10:50 IST
Last Updated 8 ಫೆಬ್ರುವರಿ 2012, 10:50 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯಕ್ಕೆ ಚಿತ್ರನಟ ದರ್ಶನ ಪತ್ನಿ, ಪುತ್ರ, ತಾಯಿ ಹಾಗೂ ಸಹೋದರನ ಜತೆ ಮಂಗಳವಾರ ಆಗಮಿಸಿ ತಡೆ ಒಡೆಸಿ ಪೂಜೆ ಮಾಡಿಸಿದರು.

ಮಧ್ಯಾಹ್ನ 1.30ಕ್ಕೆ ದೇವಾಲಯಕ್ಕೆ ಆಗಮಿಸಿದ ದರ್ಶನ್ ಮತ್ತು ಅವರ ಪತ್ನಿ ಜಯಲಕ್ಷ್ಮಿ ಗರ್ಭಗುಡಿ ಪ್ರವೇಶಿಸಿ ಅಹಲ್ಯಾದೇವಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಗರ್ಭಗುಡಿಯ ಹೊರಗೆ ಸಹೋದರ ದಿನಕರ್ ಇದ್ದರು.

ದರ್ಶನ್ ಸುಮಾರು 10 ನಿಮಿಷ ಪೂಜೆ ಸಲ್ಲಿಸಿದರು. ಅಹಲ್ಯಾದೇವಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಂ. ಚಂದ್ರು ಇತರರು ದರ್ಶನ್ ಕುಟುಂಬದ ಪೂಜೆ ಸಹಕರಿಸಿದರು.

ದೇವಾಲಯ ಪಕ್ಕದ ಕಲ್ಯಾಣಿ ಬಳಿ ತೆರಳಿದ ದರ್ಶನ್ ದಂಪತಿ ತಡೆ ಒಡೆಸಿಕೊಂಡರು. ಮಂತ್ರಿಸಿದ ತೆಂಗಿನ ಕಾಯಿ, ಕುಡಿಕೆ ದಾಟಿದರು. ಕಟ್ಟೆ ಒಡೆದ ನಂತರ ದೇವಾಲಯದ ಪೂಜಾರಿ ಕೋಳಿ ಮೊಟ್ಟೆಯನ್ನು ನೀವಳಿಸಿ ತೆಗೆದು ಒಡೆದರು.

ದರ್ಶನ್ ದಂಪತಿಯ ಪೂಜಾ ಕೈಂಕರ್ಯ ಪೂರ್ಣಗೊಂಡ ಬಳಿಕ ದರ್ಶನ್ ಸಹೋದರ ಮತ್ತು ಅವರ ತಾಯಿ ಪ್ರತ್ಯೇಕವಾಗಿ ತಡೆ ಒಡೆಸಿ ಕೊಂಡರು.

ದರ್ಶನ್ ದಂಪತಿ ಪೂಜೆ ಸಲ್ಲಿಸುವ ವೇಳೆ ಸಾರ್ವಜನಿಕರಿಗೆ ದರ್ಶನ ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.