ಶ್ರೀರಂಗಪಟ್ಟಣ: ಸೂರ್ಯನ ಅತಿ ನೇರಳೆ ಕಿರಣಗಳನ್ನು ತಡೆದು ಭೂಮಿ ಮೇಲಿನ ಜೀವ ಜಗತ್ತಿಗೆ ರಕ್ಷಣೆ ನೀಡುವ ಓಜೋನ್ ಪದರಲ್ಲಿ ರಂಧ್ರಗಳು ಉಂಟಾಗಿದ್ದು, ಜೀವ ವೈವಿಧ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಪರಿಸರ ತಜ್ಞ ಡಾ.ಓಂಕಾರ್ ನಾಯಕ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ಗಂಜಾಂನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಕ್ರಂ ಸಾರಾಭಾಯಿ ವಿಜ್ಞಾನ ಸಂಘ, ಇಕೋ ಮತ್ತು ಹೆಲ್ತ್ ಕ್ಲಬ್ಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆದ ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಖಾನೆಗಳು ಹಾಗೂ ವಾಹನಗಳ ಹೊಗೆಯಿಂದ ಓಜೋನ್ ಪದರ ಹಾಳಾಗುತ್ತಿದೆ. ವಿಷಾನಿಲ ಪರಿಸರಕ್ಕೆ ಸೇರುತ್ತಿದೆ. ಓಜೋನ್ ಪದರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ತಡೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ಫೊರೆನ್ಸಿಕ್ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆ.ಕೃಷ್ಣರಾಜ್ ಮಾತನಾಡಿದರು. ಬಿಇಓ ಕೆ.ಜಗದೀಶ್, ಸಿ.ಜೆ.ಶ್ರೀನಿವಾಸ್, ಮುಖ್ಯ ಶಿಕ್ಷಕ ಸಿ.ಎಂ.ಹೊನ್ನರಾಜು, ಪರಮೇಶ್ವರಪ್ಪ, ರಮೇಶ್ಬಾಬು ಇದ್ದರು.
ನೀರಾ ನೀತಿಗೆ ಆಗ್ರಹ: ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೆ ನೀರಾ ನೀತಿ ಜಾರಿಗೆ ತರಬೇಕು ಎಂದು ನೀರಾ ಉತ್ಪನ್ನ ಮತ್ತು ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ನೀರಾ ಉತ್ಪಾದಕರು ಮತ್ತು ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು. ಅಬಕಾರಿ ಮತ್ತು ಲಾಟರಿ ವಿಚಕ್ಷಣ ದಳ ನೀರಾ ಮಾರುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ನೀರಾ ಮಾರಾಟ ಕೇಂದ್ರಗಳ ಮೇಲಿನ ದಾಳಿ ನಿಲ್ಲಬೇಕು. ಕೇರಳ, ಮಹಾರಾಷ್ಟ್ರದಲ್ಲಿ ನೀರಾದಿಂದ ಬೆಲ್ಲ, ಸಕ್ಕರೆ, ಐಸ್ಕ್ರೀಂ ಇತರ ಉಪ ಉತ್ಪನ್ನ ತಯಾರಿಸುತ್ತಿದ್ದು, ಆದಾಯವೂ ಬರುತ್ತಿದೆ. ರಾಜ್ಯದಲ್ಲೂ ನೀರಾ ಉತ್ಪನ್ನ, ಮಾರಾಟ ಹಾಗೂ ಉಪ ಉತ್ಪನ್ನ ತಯಾರಿಸುವ ಉದ್ಯಮ ಆರಂಭಿಸಬೇಕು ಎಂದು ಒತ್ತಾಯಿಸಿದರು. ಕಾರ್ಯದರ್ಶಿ ಸುರೇಂದ್ರ, ಗಂಗಾಧರ್, ಹನುಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.