ADVERTISEMENT

ಕನ್ನಡ ಅಭಿವೃದ್ಧಿಗೆ ಮುಂದಾಗದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:45 IST
Last Updated 21 ಸೆಪ್ಟೆಂಬರ್ 2011, 6:45 IST

ಮಳವಳ್ಳಿ: ರಾಜ್ಯದ ಅಭಿವೃದ್ಧಿ ವಿಜ್ಞಾನದಿಂದ ಮಾತ್ರ ಸಾಧ್ಯವಿಲ್ಲ, ಕನ್ನಡ ಸಾಹಿತ್ಯದ ಮೂಲಕವು ಆಗುತ್ತದೆ ಆದರೆ ಸರ್ಕಾರ ಕನ್ನಡದ ಸಾಹಿತ್ಯದ ಅಭಿವೃದ್ಧಿಗೆ ಆದ್ಯತೆ ನೀಡದಿರುವುದು ದುರದೃಷ್ಟಕರ ಸಂಗತಿ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಕರ್ನಾಟಕ ಸಂಘದ ಸಹಯೋಗದಲ್ಲಿ  ಮಂಗಳವಾರ ಶಾಂತಿಭವನದಲ್ಲಿ `ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳು~ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಿಶ್ರಾಂತ ಪ್ರಾಧ್ಯಾಪಕ ಡಾ.ರಾಗೌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, `10ನೇ ಶತಮಾನದಲ್ಲಿ ಪಂಪ ಕವಿಯು ಜಾತಿಯತೆ ವಿರೋಧವಾಗಿ ಬರೆದರೂ ಇನ್ನೂ ಸಹ ಜಾತಿಯ ಸಂಕೋಲೆ ನಿರ್ಮೂಲನೆ ಆಗಿಲ್ಲ. 12ನೇ ಶತಮಾನದಲ್ಲಿ ವಚನ ಸಾಹಿತ್ಯ, ನಂತರ ಭಕ್ತಿ ಚಳುವಳಿಯ ಮೂಲಕ ಸಮಾನ, ಸ್ವಾತಂತ್ರ್ಯ ನೀಡಲು ಕಾರಣವಾಯಿತು ಎಂದು ಅವರು ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಅಧ್ಯಕ್ಷತೆ ವಹಿಸಿದ್ದ ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನಾಗಮಣಿನಾಗೇಗೌಡ ಮಾತನಾಡಿದರು. ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಪುಟ್ಟೀರೇಗೌಡ, ಪ್ರಾಂಶುಪಾಲ ಎಂ.ಸಿ.ವೀರಭಧ್ರಸ್ವಾಮಿ ವೇದಿಕೆಯಲ್ಲಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ದೊಡ್ಡಲಿಂಗೇಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೊದಲ ಗೋಷ್ಠಿಯಲ್ಲಿ   ಪ್ರೊ.ಶಿವರಾಮು ಕಾಡನಕುಪ್ಪೆ ಅವರ ಅಧ್ಯಕ್ಷತೆಯಲ್ಲಿ ಡಾ.ಮ.ರಾಮಕೃಷ್ಣ ಅವರು `ಸಾಂಸ್ಕೃತಿಕ ಸ್ಥಿತ್ಯಂತರಗಳು: ಸ್ವರೂಪ ಮತ್ತು ನಿಲುವು~ ಹಾಗೂ ಪ್ರೊ.ಎಂ.ಜಿ.ಚಂದ್ರಶೇಖರಯ್ಯ  `ಪ್ರಭುತ್ವವಾದಿ ವ್ಯವಸ್ಥೆ ಮತ್ತು ಪ್ರತಿಭಟನೆ~ ಎಂಬ ವಿಷಯ ಮಂಡಿಸಿದರು.

ಎರಡನೇ ಗೋಷ್ಠಿಯಲ್ಲಿ ಡಾ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಡಾ.ಪಿ.ಕೆ.ರಾಜಶೇಖರ ಭಕ್ತಿ ಚಳುವಳಿಯ ಉದಾರವಾದಿ ನೆಲೆಗಳು, ಡಾ.ಚಿಕ್ಕಮರಳಿ ಬೋರೇಗೌಡ ಅವರು ಸಾಮಾಜಿಕ ಮೌಲ್ಯಗಳು: ಕಾಲಿಕ-ಸರ್ವಕಾಲಿಕ ವಿಷಯ ಮಂಡಿಸಿದರು.

ಸಮಾರೋಪವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ಸಬಿಹಾ ಭೂಮಿಗೌಡ ಮಾತನಾಡಿದರು. ಎಚ್.ತಿಮ್ಮೇಗೌಡ ಉಪಸ್ಥಿತರಿದ್ದು ಪ್ರಾಂಶುಪಾಲ ಎಂ.ಸಿ.ವೀರಭದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.