ADVERTISEMENT

`ಕನ್ನಡ ಉಳಿಸಲು ಕಸಾಪಗೆ ದತ್ತಿ ನೀಡಿ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 7:15 IST
Last Updated 5 ಏಪ್ರಿಲ್ 2013, 7:15 IST

ಶ್ರೀರಂಗಪಟ್ಟಣ: ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್‌ಗೆ ಉದಾರವಾಗಿ ದತ್ತಿ ನೀಡಬೇಕು ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸುಶೀಲಾಬಾಯಿ- ತುಕ್ಕೋಜಿರಾವ್ ಸ್ಮಾರಕ ಪ್ರತಿಭಾ ಪುರಸ್ಕಾರ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೂಡ ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ. ಕನ್ನಡ ಭಾಷೆಯ ಜಾನಪದೀಯ ಪದಗಳ ಬಳಕೆ ನಿಂತು ಹೋಗುವ ಅಪಾಯ ಎದುರಾಗಿದೆ. ನಮ್ಮ ಮಾತೃ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗುವುದನ್ನು ತಡೆಯಲು ಕನ್ನಡ ಸಾಹಿತ್ಯ ಪರಿಷತ್ ನಿರಂತರ ಪ್ರಯತ್ನ ಮಾಡುತ್ತಿದೆ. ದತ್ತಿ ಕಾರ್ಯಕ್ರಮಗಳ ಮೂಲಕ ಶಾಲೆ, ಕಾಲೇಜುಗಳಲ್ಲಿ ಕನ್ನಡದ ಮಹತ್ವವನ್ನು ತಿಳಿಸಿಕೊಡಬೇಕಾದ ಅಗತ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ. ಸಾಹಿತ್ಯ ಪರಿಷತ್‌ಗೆ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿ ಇದ್ದು, ಕನ್ನಡ ಭಾಷಿಕರು ಸದಸ್ಯತ್ವ ಪಡೆಯಬೇಕು ಎಂದು ಹೇಳಿದರು.

  ಕೃಷಿ ಅಧಿಕಾರಿ ಕೆ.ಟಿ.ರಂಗಯ್ಯ ಮಾತನಾಡಿ, ಗುಡಿ ಕೈಗಾರಿಕೆಗಳು ಹಂತ ಹಂತವಾಗಿ ನಶಿಸುತ್ತಿವೆ. ರಾಗಿ ಹಿಟ್ಟು, ಧಾನ್ಯ ಸಹಿತ ಪೊಟ್ಟಣ ಸಂಸ್ಕೃತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉದ್ಯಮಿ ಟಿ.ಪ್ರಕಾಶ್ ಮಾತನಾಡಿದರು. ಕಸಾಪ ತಾಲ್ಲೂಕು ಅ್ಯಕ್ಷ ಪುರುಷೋತ್ತಮ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲೆ ಪ್ರೊ.ಬಿ.ಗೌರಮ್ಮ, ಉಪನ್ಯಾಸಕರಾದ ಜ್ಞಾನದೇವಸ್ವಾಮಿ, ರಂಗಸ್ವಾಮಿ, ಡಾ.ಬಿ.ನರಸಿಂಹಸ್ವಾಮಿ ಇತರರು ಇದ್ದರು. ಕರಕುಶಲ ವಸ್ತು ತಯಾರಿಕೆ ಸ್ಪರ್ಧೆಯಲ್ಲಿ ಹಸೀಬಾ ಬಾನು ಪ್ರಥಮ, ಅರ್ಪಿತಾ ದ್ವಿತೀಯ ಹಾಗೂ ಭಾನು ತೃತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT