ADVERTISEMENT

‘ಕನ್ನಡ ಕಾರ್ಯಕರ್ತ’ರೂ ಅಧ್ಯಕ್ಷರಾಗಲಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 5:58 IST
Last Updated 25 ನವೆಂಬರ್ 2017, 5:58 IST
ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಹಾಗೂ ಎಂ.ಎನ್‌.ರಾಜಲಕ್ಷ್ಮಿ ದಂಪತಿಯನ್ನು ಸನ್ಮಾನಿಸಲಾಯಿತು
ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಹಾಗೂ ಎಂ.ಎನ್‌.ರಾಜಲಕ್ಷ್ಮಿ ದಂಪತಿಯನ್ನು ಸನ್ಮಾನಿಸಲಾಯಿತು   

ಮಂಡ್ಯ: ‘ಸಾಹಿತಿಗಳು ಮಾತ್ರವಲ್ಲದೆ ಕನ್ನಡದ ಕೆಲಸ ಮಾಡುವ ಸಂಘಟಕರು, ಕಾರ್ಯಕರ್ತರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು’ ಎಂದು ಹಿರಿಯ ಸಾಹಿತಿ ಡಾ.ಕೆ.ಭೈರವಮೂರ್ತಿ ಹೇಳಿದರು.

ಮಳವಳ್ಳಿಯಲ್ಲಿ ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಹಾಗೂ ಎಂ.ಎನ್‌.ರಾಜಲಕ್ಷ್ಮಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯದ ಉಳಿವಿಗೆ ಕನ್ನಡದ ಕಟ್ಟಾಳುಗಳ ಸೇವೆ ಅನುಪಮವಾದುದು. ಸಾಹಿತಿಗಳು ಬರೆಯುತ್ತಾರೆ ಅಷ್ಟೆ. ಕನ್ನಡ ಪರ ಕೆಲಸ ಮಾಡುವ ಕಾರ್ಯಕರ್ತರಿಗೂ ಬರೆಯುವ ಶಕ್ತಿ ಇರುತ್ತದೆ. ಹೀಗಾಗಿ ನುಡಿ ಹಬ್ಬಗಳಿಗೆ ಅಧ್ಯಕ್ಷರಾಗುವ ಅವಕಾಶ ಅವರಿಗೂ ಸಿಗಬೇಕು’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ಅಲ್ಲದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿಗಳು ಮಾತ್ರವಲ್ಲದೆ ಕಿರಿಯ ಸಾಹಿತಿಗಳೂ ಅಧ್ಯಕ್ಷರಾಗಬೇಕು. ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅವರು ಕಾವ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು ಅಖಿಲ ಭಾರತ ಸಮ್ಮೇಳನದಲ್ಲಿ ಅಧ್ಯಕ್ಷರಾಗುವ ಅರ್ಹತೆ ಇದೆ’ ಎಂದು ಹೇಳಿದರು.

‘ನಾಡಿನ ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕಾವ್ಯ ಕ್ಷೇತ್ರದಲ್ಲಿ ಹೆಬ್ರಿ ಅವರ ಸಾಧನೆ ಅನನ್ಯವಾದುದು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಮೌಲಿಕವಾದ ನೂರಾರು ಕೃತಿ ನೀಡಿದ್ದಾರೆ. ಇವರ ಬದುಕು ಬರಹ ಬಲುದೊಡ್ಡದು. ಮಾನವೀಯತೆಯ ಸಾಕಾರ ರೂಪವಾದ ಇವರು ತಮ್ಮ ಸುತ್ತ ಸಾಂಸ್ಕೃತಿಕ ಜಗತ್ತನ್ನೇ ನಿರ್ಮಿಸಿಕೊಂಡಿದ್ದಾರೆ. ಹೆಬ್ರಿ ಅವರು ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲೆಲ್ಲಿ ಸಂಸ್ಕೃತಿ ಇದೆಯೋ ಅಲ್ಲೆಲ್ಲ ಹೆಬ್ರಿ ಅವರು ಸಲ್ಲುತ್ತಾರೆ.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿ ‘ಡಾ.ಪ್ರದೀಪ್ ಕುಮಾರ್‌ ಹೆಬ್ರಿ ಅವರು ಕಾವ್ಯ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಂಗೀತ, ಯಕ್ಷಗಾನ, ನಾಟ್ಯ, ವ್ಯಾಖ್ಯಾನ, ಗಮಕ, ಸಂಘಟನೆ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಹೆಸರು ಮಾಡಿದ್ದಾರೆ. ಅವರೊಬ್ಬ ಸಾಹಿತ್ಯ– ಸಾಂಸ್ಕೃತಿಕ ಲೋಕದ ಪ್ರತಿನಿಧಿಯಾಗಿದ್ದಾರೆ. ಅವರು ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಬಾಗಲಕೋಟೆಯ ಹಿರಿಯ ಸಾಹಿತಿ ಜಯವಂತ ಕಾಡದೇವರ, ಸಂಸ್ಕೃತಿ ಸಂಘಟನೆಯ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಕಾರ್ಯದರ್ಶಿ ಎಂ.ವಿ.ಧರಣೇಂದ್ರಯ್ಯ, ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಕಾರ್ಯದರ್ಶಿ ಎಸ್.ಶ್ರೀನಿವಾಸಶೆಟ್ಟಿ, ಉಪನ್ಯಾಸಕ ಹೊಳಲು ಶ್ರೀಧರ್, ಡ್ಯಾಪೊಡಿಲ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾ ಕೃಷ್ಣ, ಹಾಜರಿದ್ದರು.

ಹೊಸ ಹೆಬ್ರಿ ತಾಲ್ಲೂಕಿನಿಂದಲೂ ಗೌರವ‌
2018, ಜ.1ರಿಂದ ಹೊಸ ತಾಲ್ಲೂಕಾಗಿ ರಚನೆಯಾಗುತ್ತಿರುವ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಹೆಬ್ರಿ ಅವರೇ ಆಯ್ಕೆಯಾಗಿದ್ದಾರೆ. ತವರಿನ ಕನ್ನಡ ಹಬ್ಬದ ಅಧ್ಯಕ್ಷ ಸ್ಥಾನವನ್ನು ಹೆಬ್ರಿ ಅವರು ಮನಸಾರೆ ಒಪ್ಪಿದ್ದಾರೆ. ಫೆಬ್ರುವರಿಯಲ್ಲಿ ಸಮ್ಮೇಳನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ನಾನು ಹುಟ್ಟಿ, ಬೆಳೆದ ಊರಿನ ನುಡಿಹಬ್ಬದಲ್ಲಿ ಅಧ್ಯಕ್ಷ ಸ್ಥಾನ ವಹಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಇದರಲ್ಲಿ ತಾಲ್ಲೂಕು, ಮಟ್ಟ ಜಿಲ್ಲಾ ಮಟ್ಟ ಎಂಬ ಯಾವುದೇ ಭೇದವಿಲ್ಲ. ತವರಿನ ಸನ್ಮಾನ ಎಲ್ಲಕ್ಕೂ ಮಿಗಿಲಾದುದು’ ಎಂದು ಡಾ.ಹೆಬ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.